.

ಬಿಳಿ ಬಣ್ಣದಲ್ಲಿರುವುದು ಮಹಾಕೂಟೇಶ್ವರ ದೇವಾಲಯ. ಇದು "ದ್ರಾವಿಡ "ಶೈಲಿಯಲ್ಲಿದ್ದರೆ ಮುಂಭಾಗದಲ್ಲಿರುವುದು ಸಂಗಮೇಶ್ವರ ದೆವಾಲಯ "ನಾಗರ" ಶೈಲಿಯಲ್ಲಿದೆ


ದ್ರಾವಿಡ ಶೈಲಿಯಲ್ಲಿರುವ ಮಲ್ಲಿಕಾರ್ಜುನ ದೇವಾಲಯ

ಮಹಾಕೂಟವು ಚಾಲುಕ್ಯರ ಕಾಲದ ಪ್ರಸಿದ್ಧ ಪುಣ್ಯಕ್ಷೇತ್ರ ಬಾದಾಮಿಯ ಪೂರ್ವಕ್ಕೆ ಸುಮಾರು 5 ಕಿಲೋ ಮೀಟರ್ ದೂರದಲ್ಲಿರುವ ನಂದಿಕೇಶ್ವರ ಗ್ರಾಮದ ಬಳಿ ಇರುವ ತೀರ್ಥಕ್ಷೇತ್ರವಾಗಿದ್ದು ಚಾಳುಕ್ಯರು ತಮ್ಮ ಆಡಳಿತದ ಆದಿ ಭಾಗದಲ್ಲಿ ನಿರ್ಮಿಸಿದ ದೇವಾಲಯಗಳ ಅವಶೇಷಗಳನ್ನು ಒಳಗೊಂಡಿದೆ. ಮಹಾಕೂಟ ಪುಣ್ಯಕ್ಷೇತ್ರವು ದಕ್ಷಿಣ ಕಾಶಿ ಎಂದು ಪ್ರಖ್ಯಾತಿಹೂಂದಿದೆ. ಅತೀ ಅಮೂಲ್ಯವಾದ ಮತ್ತು ವಿರಳವಾದ ಗಿಡಮೂಲಿಕೆ ಸಂಪತ್ತು ಈ ಸುಕ್ಷೇತ್ರದಲ್ಲಿ ಕಾಣಬಹುದು

ಇತಿಹಾಸ ಬದಲಾಯಿಸಿ

ಕ್ರಿ ಶ 602ರಲ್ಲಿ ಚಾಳುಕ್ಯರ ಮಂಗಳೇಶನು ತನ್ನ ಯುದ್ಧ-ವಿಜಯಗಳ ನೆನಪಿಗಾಗಿ ಇಲ್ಲಿ ಅನೇಕ ಶಿವಲಿಂಗಗಳ ದೇವಾಲಯಗಳನ್ನು ಕಟ್ಟಿಸಿದ್ದಾನೆ. ಮಹಾಕೂಟೇಶ್ವರ ದೇವಾಲಯದ ಮುಂದೆ ಚಾಳುಕ್ಯರಾಜ ಮಂಗಲೀಶನ ಶಾಸನವುಳ್ಳ ಅಷ್ಟಕೋನದ ಶಿಲಾಸ್ತಂಭವಿತ್ತು. ಇದು ಈಗ ಬಿಜಾಪುರದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿದೆ. ಮಂಗಲೀಶ ಕಳಚುರಿ ಮುಂತಾದವರನ್ನು ಗೆದ್ದು ಯುದ್ಧದಲ್ಲಿ ಸಂಗ್ರಹವಾದ ಐಶ್ವರ್ಯವನ್ನು ಚಕ್ರವರ್ತಿಯಾಗಿದ್ದ ತನ್ನ ಅಣ್ಣ ಶಕವರ್ಷ 524ರಲ್ಲಿ ಅರ್ಪಿಸಿದನೆಂದು ಶಾಸನದಲ್ಲಿ ಹೇಳಿದೆ. ಆದ್ದರಿಂದ ಈ ದೇವಾಲಯ 6ನೆಯ ಶತಮಾನದ್ದೆಂದು ತೋರುತ್ತದೆ. ಈ ಶಾಸನವಲ್ಲದೆ ಮಹಾಕೂಟೇಶ್ವರನಿಗೆ ದೇವಾಲಯದ ಕಂಬದ ಮೇಲೆ ವಿಜಯಾದಿತ್ಯನ ಪ್ರಾಣವಲ್ಲಭೆಯಾಗಿದ್ದ ವಿನಾಪೋಟಿಯ ಶಾಸನವೂ ಇದೆ. ಇವಳು ದೇವರಿಗೆ ಚಿನ್ನದಿಂದ ಕಟ್ಟಿದ ಪೀಠ ಮತ್ತು ಬೆಳ್ಳಿ ಕೊಡೆ ಮಾಡಿಸಿದಳೆಂದೂ ಮಂಗಳ ಊರಿನ ಎಂಟು ಕ್ಷೇತ್ರ ಭೂಮಿಯನ್ನು ದಾನ ಮಾಡಿದಳೆಂದೂ ಶಾಸನದಲ್ಲಿದೆ. ಇಲ್ಲಿರುವ ಹಲವು ಶೈವದೇವಾಲಯಗಳಿಂದ ಇದೊಂದು ಪ್ರಸಿದ್ಧ ಶೈವ ಧರ್ಮದ ಕೇಂದ್ರವಾಗಿದ್ದಿರಬೇಕೆಂದು ಊಹಿಸಿದಲಾಗಿದೆ.


ಪುಣ್ಯಕ್ಷೇತ್ರವಾಗಿ ಬದಲಾಯಿಸಿ

ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಸಾಲಿನ ನಡುವೆ, ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳ ರಮಣೀಯವಾಗಿ ಕಾಣುತ್ತವೆ.ಈ ದೇವಾಲಯ 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ..... ದೇವಾಲಯದ ಸುತ್ತ ಅಗಸ್ತ್ತ್ಯೆಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ. ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ.ಬಾದಾಮಿ ಚಾಲುಕ್ಯರ ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ.

ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಮಧ್ಯೆ. ಒಂದು ಪುಷ್ಕರಣಿ ಮತ್ತು ಅದರ ಸುತ್ತಲೂ ಸಣ್ಣ ಸಣ್ಣ ದೇವಾಲಯಗಳಿವೆ.

ಶಿವಭಕ್ತರಿಗೆ ಇಂದಿಗೂ ಇದೊಂದು ಪುಣ್ಯಸ್ಥಳವಾಗಿದ್ದು 'ದಕ್ಷಿಣಕಾಶಿ' ಎಂದೇ ಪ್ರಸಿದ್ಧವಾಗಿದೆ. ಅನೇಕ ಶಿವಾಲಯಗಳ ಸಮುಚ್ಚಯವಾಗಿರುವುದರಿಂದ ಇದಕ್ಕೆ 'ಮಹಾಕೂಟ' ಎಂದು ಹೆಸರು ಬಂದಿದೆ. ಇಲ್ಲಿನ ಮುಖ್ಯ ದೇವಾಲಯವೊಂದರ ಶಾಸನದಲ್ಲಿ 'ಅನ್ಯ ಕ್ಷೇತ್ರಗಳಲ್ಲಿ ಮಾಡಿದ ಪಾಪವು ಪುಣ್ಯ ಕ್ಷೇತ್ರಗಳಲ್ಲಿ ತೊಳೆಯಲ್ಪಡುತ್ತದೆ ಆದರೆ ಪುಣ್ಯಕ್ಷೇತ್ರಗಳಲ್ಲಿ ಪಾಪ ಮಾಡಿದರೆ ಅದು ವಜ್ರಲೇಪದಂತೆ' ಎಂದು ಅಪವಿತ್ರಗೊಳಿಸುವ ಭಕ್ತರಿಗೆ ಎಚ್ಚರಿಕೆ ಶಾಸನ ಬರೆಸಲಾಗಿದೆ.

Gallery ಬದಲಾಯಿಸಿ

ಮಹಾಕೂಟದ ಪುಷ್ಕರಿಣಿ

ಟೆಂಪ್ಲೇಟು:Clear all


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಮಹಾಕೂಟ&oldid=799475" ಇಂದ ಪಡೆಯಲ್ಪಟ್ಟಿದೆ