ಚೋಮನ ದುಡಿ (ಸಿನೆಮಾ)

ಕನ್ನಡದ ಒಂದು ಚಲನಚಿತ್ರ

ಚೋಮನ ದುಡಿ ಒಂದು ಕನ್ನಡ ಚಲನಚಿತ್ರ. ಇದು ಶಿವರಾಮ ಕಾರಂತರು ಬರೆದ ಅದೇ ಹೆಸರಿನ ಕಾದಂಬರಿ ಆಧಾರಿತವಾಗಿದ್ದು ಸಾಮಾಜಿಕ ಕಥಾವಸ್ತುವನ್ನೊಳಗೊಂಡಿದೆ. ಈ ಚಲನಚಿತ್ರವು ೧೯೭೫ರಲ್ಲಿ ಬಿಡುಗಡೆಯಾಯಿತು. ಇದು ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.[೧][೨]. ಈ ಸಿನೆಮಾದ ನಿರ್ದೇಶಕರು ಬಿ.ವಿ.ಕಾರಂತ. ಆಗಿನ ಕಾಲದ ಸಾಮಾಜಿಕ ಸ್ಥಿತಿಗತಿ, ಜಾತಿವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಜನರ ಹತಾಶೆ, ಅಸಹಾಯಕತೆ, ಬಡತನ, ದುರ್ಭರ ಬದುಕನ್ನು ಈ ಚಲನಚಿತ್ರವು ಬಿಂಬಿಸುತ್ತದೆ.

ಚೋಮನ ದುಡಿ (ಸಿನೆಮಾ)
ಚೋಮನ ದುಡಿ
ನಿರ್ದೇಶನಬಿ.ವಿ.ಕಾರಂತ
ನಿರ್ಮಾಪಕಅಶೋಕ್ ಕುಮಾರ್
ಚಿತ್ರಕಥೆಶಿವರಾಮ ಕಾರಂತ
ಕಥೆಶಿವರಾಮ ಕಾರಂತ
ಸಂಭಾಷಣೆಶಿವರಾಮ ಕಾರಂತ
ಪಾತ್ರವರ್ಗಎಂ.ವಿ.ವಾಸುದೇವರಾವ್ ಪದ್ಮಾ ಕುಮಟಾ ಸುಂದರರಾಜ್
ಸಂಗೀತಬಿ ವಿ ಕಾರ೦ತ
ಛಾಯಾಗ್ರಹಣಎಸ್.ರಾಮಚಂದ್ರ
ಸಂಕಲನಪಿ. ಭಕ್ತವತ್ಸಲಂ
ಬಿಡುಗಡೆಯಾಗಿದ್ದು೧೯೭೫
ಪ್ರಶಸ್ತಿಗಳುಸ್ವರ್ಣಕಮಲ ಪ್ರಶಸ್ತಿ
ಚಿತ್ರ ನಿರ್ಮಾಣ ಸಂಸ್ಥೆಪ್ರಜಾ ಫಿಲಂಸ್
ಹಿನ್ನೆಲೆ ಗಾಯನಬಿ.ಕೆ.ಸುಮಿತ್ರಾ, ಜಿ.ಕೆ.ವೆಂಕಟೇಶ್
ಇತರೆ ಮಾಹಿತಿಶಿವರಾಮ ಕಾರಂತರ ಕಾದಂಬರಿ ಅಧಾರಿತ ಚಿತ್ರ

ಕಥಾಹಂದರ ಬದಲಾಯಿಸಿ

ಚೋಮ ಎಂಬ ಅಸ್ಪೃಶ್ಯ ಕೆಳಜಾತಿಯ ಮನುಷ್ಯ ಒಂದು ಹಳ್ಳಿಯಲ್ಲಿ ಜಮೀನ್ದಾರನೊಬ್ಬನ ಬಳಿ ಜೀತದಾಳಾಗಿ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ತನ್ನ ಜಮೀನನ್ನು ಉಳುವ, ಬೇಸಾಯ ಮಾಡುವ ಉತ್ಕಟ ಆಸೆ ಇದ್ದರೂ ಸಹ ಅವನ ಸಾಮಾಜಿಕ ಸ್ಥಾನದ ಕಾರಣದಿಂದಾಗಿ ಉಳುಮೆ ಮಾಡಲು ಸಾಧ್ಯವಾಗಿರುವುದಿಲ್ಲ. ಕಾಡಿನಲ್ಲಿ ಸಿಕ್ಕಿದ ಎರಡು ಎತ್ತುಗಳನ್ನು ಅವನು ಸಾಕಿಕೊಂಡಿರುತ್ತಾನೆ. ಆದರೆ ಅವುಗಳನ್ನ ಉಳುಮೆಗೆ ಬಳಸಿಕೊಳ್ಳಲಾಗುತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರಕರು ಚೋಮನನ್ನು ಜಮೀನು ಉಳುಮೆಯ ಆಮಿಷ ತೋರಿಸಿ ಮತಾಂತರಗೊಳಿಸಲು ನೋಡುತ್ತಾರೆ. ಆದರೆ ಚೋಮ ತನ್ನ ನಂಬಿಕೆಯನ್ನು ಬಿಟ್ಟು ಮತಾಂತರಗೊಳ್ಳಲು ಒಪ್ಪುವುದಿಲ್ಲ. ಅವನು ದುಡಿ ಬಡಿಯುವ ಮೂಲಕ ತನ್ನ ಹಣೆಬರಹದ ಸಿಟ್ಟಿನ ಹತಾಶೆಯನ್ನು ಹೊರಹಾಕುತ್ತಾನೆ.

ಅವನಿಗೆ ನಾಲ್ಕು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು. ಇಬ್ಬರು ಹಿರಿಯ ಗಂಡುಮಕ್ಕಳು ದೂರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಾ ಸಾಲವನ್ನು ತೀರಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಒಬ್ಬ ಮಗ ಕಾಲರಾ ರೋಗಕ್ಕೆ ಬಲಿಯಾಗಿ ಸಾವಿಗೀಡಾಗುತ್ತಾನೆ. ಮತ್ತೊಬ್ಬ ಮಗ ಕ್ರೈಸ್ತ ಹುಡುಗಿಯನ್ನು ಮದುವೆಯಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಾನೆ. ಮಗಳು ’ಬೆಳ್ಳಿ’ ಒಂದು ತೋಟದಲ್ಲಿ ಕೆಲಸ ಮಾಡುತ್ತಾ ತೋಟದ ಮಾಲೀಕ ರೈಟರ್ ಮನ್ವೇಲನ ಬಲೆಗೆ ಬೀಳುತ್ತಾಳೆ. ಅವಳನ್ನು ತೋಟಕ ಮಾಲೀಕ ಅತ್ಯಾಚಾರ ಮಾಡಿ ಚೋಮನ ಸಾಲವನ್ನು ಮನ್ನಾ ಮಾಡುತ್ತಾನೆ. ಅವಳು ಮನೆಗೆ ಹಿಂದಿರುಗಿ ಈ ವಿಷಯವನ್ನು ಚೋಮನಿಗೆ ಹೇಳುತ್ತಾಳೆ. ಚೋಮನ ಕಿರಿಯ ಮಗ ನದಿಯಲ್ಲಿ ಮುಳುಗಿ ಸಾಯುತ್ತಾನೆ. ಅವನು ಅಸ್ಪೃಶ್ಯ ಜಾತಿಯ ಕಾರಣ ಆತ ಮುಳುಗುವ ಸಮಯದಲ್ಲಿ ಯಾರೂ ಸಹ ಅವನನ್ನು ಉಳಿಸಲು ಹೋಗದೇ ಮುಳುಗಿಹೋಗುತ್ತಾನೆ. ಚೋಮ ತನ್ನ ಮಗಳು ಮನ್ವೆಲಾನ ಜೊತೆ ರತಿಯಾಟದಲ್ಲಿ ತೊಡಗಿದ್ದನ್ನು ನೋಡುತ್ತಾನೆ. ಕೋಪದಿಂದ ಅವಳನ್ನು ಹೊಡೆದು ಮನೆಯಿಂದ ಹೊರಹಾಕುತ್ತಾನೆ. ತನ್ನ ವಿಧಿಯನ್ನು ಮೆಟ್ಟಿನಿಂತು ಎದುರಿಸುವ ಸಲುವಾಗಿ ಅವನು ತಾನೇ ತನ್ನ ಚೂರು ಜಮೀನನ್ನು ಉಳುತ್ತಾನೆ. ಎತ್ತುಗಳನ್ನು ಕಾಡಿಗಟ್ಟುತ್ತಾನೆ. ಸಿನೆಮಾ ಕೊನೆಯಲ್ಲಿ ಚೋಮ ಮನೆಯೊಳಗೆ ಕೂತು ಬಾಗಿಲುಹಾಕಿಕೊಂಡು ದುಡಿಯನ್ನು ಬಡಿಯುತ್ತಾ ಕೊನೆಯುಸಿರೆಳೆಯುತ್ತಾನೆ.

ಪಾತ್ರಗಳು ಹಾಗೂ ನಟರು[೩] ಬದಲಾಯಿಸಿ

ಪಾತ್ರ ನಟ/ನಟಿ
ಚೋಮ ಎಂ.ವಿ.ವಾಸುದೇವ ರಾವ್
ಬೆಳ್ಳಿ ಪದ್ಮಾಕುಮಟಾ
ಚನಿಯ ಎಂ. ಜಯರಾಜನ್
ಗುರವ ಸುಂದರರಾಜ್
ಕಾಳ ಎಂ.ವಿ.ನಾಗರಾಜ್
ನೀಲ ನಾಗೇಂದ್ರ ಕುಮಟಾ

ಪ್ರಶಸ್ತಿ ಪುರಸ್ಕಾರಗಳು ಬದಲಾಯಿಸಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 1975-76
  • ಮೊದಲ ಅತ್ಯುತ್ತಮ ಚಿತ್ರ
  • ಅತ್ಯುತ್ತಮ ನಟ - ಎಂ. ವಿ. ವಾಸುದೇವ ರಾವ್
  • ಅತ್ಯುತ್ತಮ ಪೋಷಕ ನಟಿ - ಪದ್ಮಾ ಕುಮಟಾ
  • ಅತ್ಯುತ್ತಮ ಕತೆ – ಕೆ. ಶಿವರಾಮ ಕಾರಂತ
  • ಅತ್ಯುತ್ತಮ ಚಿತ್ರಕತೆ - ಕೆ. ಶಿವರಾಮ ಕಾರಂತ
  • ಅತ್ಯುತ್ತಮ ಧ್ವನಿಗ್ರಹಣ - ಕೃಷ್ಣಮೂರ್ತಿ

ಕೆಲವು ವಿಶೇಷ ಸಂಗತಿಗಳು ಬದಲಾಯಿಸಿ

  • 'ಚೋಮನ ದುಡಿ' ಪದ್ಮಾಕುಮಟಾ ಅವರು ನಟಿಸಿದ ಮೊದಲ ಚಲನಚಿತ್ರ, ಹಾಗೂ ಸುಂದರರಾಜ್ ನಟಿಸಿದ ಎರಡನೇ ಚಿತ್ರ.[೫]

ಉಲ್ಲೇಖಗಳು ಬದಲಾಯಿಸಿ

  1. "ಚೋಮನ ದುಡಿ". ಪ್ರಜಾವಾಣಿ ವಾರ್ತೆ. 19 March 2011. Retrieved 24 March 2018.[ಶಾಶ್ವತವಾಗಿ ಮಡಿದ ಕೊಂಡಿ]
  2. "A genius of theatre". The Frontline. 12–25 October 2002. Archived from the original on 2008-12-06. Retrieved 2009-03-14.
  3. "Chomana Dudi (ಚೋಮನ ದುಡಿ) Cast". Chiloka. Retrieved 5 April 2018.
  4. "ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ". bangalorewaves.com. 25 March 2015. Retrieved 25 March 2018.
  5. "ಚೋಮನ ದುಡಿ' ಕಾಡುವಂತೆಯೇ ಪದ್ಮಾ ಕುಮಟ ಸದಾ ಕಾಲಕ್ಕೂ ಕಾಡುತ್ತಾರೆ". kannadanewsnow.com. 2 April 2017. Retrieved 25 March 2018.[ಶಾಶ್ವತವಾಗಿ ಮಡಿದ ಕೊಂಡಿ]

ಹೆಚ್ಚಿನ ಓದು ಬದಲಾಯಿಸಿ

Shampa Banerjee, Anil Srivastava (1988) [1988]. One Hundred Indian Feature Films: An Annotated Filmography. Taylor & Francis. ISBN 0-8240-9483-2.

ಇವನ್ನೂ ನೋಡಿ ಬದಲಾಯಿಸಿ

ಹೊರಸಂಪರ್ಕಕೊಂಡಿಗಳು ಬದಲಾಯಿಸಿ