ಅಮರಸಿಂಹನು ಕ್ರಿ.ಶ. ೪೦೦ ರ ಸುಮಾರಿಗೆ ಇದ್ದ ಗುಪ್ತವಂಶದ ಎರಡನೆಯ ಚಂದ್ರಗುಪ್ತ ಅರಸನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಒಬ್ಬನು. ಅವನು ಕ್ರಿ.ಶ. ಏಳನೇ ಶತಮಾನದಲ್ಲಿದ್ದ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದವನು ಎಂದೂ ಕೆಲವು ಮೂಲಗಳು ತಿಳಿಸುತ್ತವೆ. ಅಮರಸಿಂಹನು ಬೌದ್ಧ ಅಥವಾ ಜೈನ ಪಂಡಿತನು. ಅದ್ವೈತ ಮತಪ್ರಚಾರಕ್ಕೆಂದು ಭಾರತದಾದ್ಯಂತ ಪ್ರವಾಸದಲ್ಲಿದ್ದ ಶಂಕರಾಚಾರ್ಯರು ಅಮರಸಿಂಹನನ್ನು ಭೆಟ್ಟಿಯಾಗಬಯಸಿದಾಗ ಶಂಕರಾಚಾರ್ಯರೊಡನೆ ವಾದಕ್ಕಿಳಿಯಬಯಸದ ಅಮರಸಿಂಹನು ತನ್ನ ಎಲ್ಲ ಕೃತಿಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದನು. ಆಗ ಇದನ್ನು ತಿಳಿದ ಶಂಕರಾಚಾರ್ಯರು ಅವನ ಮನೆಗೆ ಧಾವಿಸಿದರು. ಅಷ್ಟು ಹೊತ್ತಿಗಾಗಲೇ ಅಮರಕೋಶವೊಂದನ್ನು ಬಿಟ್ಟು ಎಲ್ಲ ಕೃತಿಗಳು ಸುಟ್ಟು ಹೋಗಿದ್ದವು. ಈ ಸಂಗತಿಯನ್ನು ಶಂಕರದಿಗ್ವಿಜಯ ದಲ್ಲಿ ಹೇಳಲಾಗಿದೆ. ಅಮರಕೋಶವು ಸಂಸ್ಕೃತ ಭಾಶೆಯಲ್ಲಿ ರಚಿಸಿದ ನಾಮಲಿಂಗಾನುಶಾಸನ ಎಂಬ ಸಮಾನಾರ್ಥಕ ಪದಕೋಶ. ನಾಮಲಿಂಗಾನುಶಾಸನ ಕೃತಿಯನ್ನು ಅವನ ಗೌರವಾರ್ಥ ಅಮರಕೋಶ ಎಂದು ಕರೆಯುತ್ತಾರೆ. ಈ ಕೃತಿಯು ಅಮರಾನಿರ್ಜರಾದೇವಾಃ ಎಂದು ಅರಂಭವಾಗುವುದರಿಂದ ಅಮರಕೋಶ ಎಂಬ ಹೆಸರು ಬಂದಿದೆ ಎಂದೂ ಹೇಳುತ್ತಾರೆ. ನಾಮಲಿಂಗಾನುಶಾಸನ ಎಂದರೆ ನಾಮ ಮತ್ತು ಲಿಂಗಗಳನ್ನು ಕುರಿತಾದ ವ್ಯವಸ್ಥೆ ಎಂದರ್ಥ.

"https://kn.wikipedia.org/w/index.php?title=ಅಮರಸಿಂಹ&oldid=607981" ಇಂದ ಪಡೆಯಲ್ಪಟ್ಟಿದೆ