ಹಟ್ಟಿಯಂಗಡಿ ನಾರಾಯಣ ರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
( ಯಾವುದೇ ವ್ಯತ್ಯಾಸವಿಲ್ಲ )

೧೨:೫೩, ೨೮ ಜನವರಿ ೨೦೨೦ ನಂತೆ ಪರಿಷ್ಕರಣೆ

1863-1921. ಹೊಸಗನ್ನಡ ಅರುಣೋದಯ ಕಾಲದ ಆದ್ಯಲೇಖಕರಲ್ಲೊಬ್ಬರು. ಆಂಗ್ಲ ಕವನಗಳನ್ನು ಕನ್ನಡಕ್ಕೆ ಅನುವಾದಿಸಿ ಹೊಸಗನ್ನಡದ ನವೋದಯಕ್ಕೆ ಅಡಿಗಲ್ಲು ಹಾಕಿದವರು. 1863 ಫೆಬ್ರವರಿ 11ರಂದು ಮಂಗಳೂರಿನಲ್ಲಿ ಜನಿಸಿದರು. ಕಾರ್ಕಳ ಮತ್ತು ಮದರಾಸುಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಸರಳತೆ, ಸಾತ್ವಿಕತೆ, ಸಹಾಯ ತತ್ಪರತೆಗಳು ಇವರ ವ್ಯಕ್ತಿತ್ವದ ವೈಶಿಷ್ಟ್ಯಗಳು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ವಕೀಲರಾಗಬೇಕೆಂಬ ಆಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಮದರಾಸಿಗೆ ತೆರಳಿ ಕಾನೂನು ಪದವಿ ಗಳಿಸಿದರು. ವಕೀಲವೃತ್ತಿ ಹಿಡಿದು ಅದರೊಂದಿಗೇ ಇಂಡಿಯನ್ ಸ್ಪೆಕ್ಟೇಟರ್ ಎಂಬ ರಾಷ್ಟ್ರೀಯ ಪತ್ರಿಕೆಯಲ್ಲಿ ಅನಾಮಧೇಯರಾಗಿ ಲೇಖನ ಬರೆಯುತ್ತಿದ್ದರು. ಕಾರಣಾಂತರಗಳಿಂದ ಪತ್ರಿಕೆ ಮುಂಬಯಿಗೆ ಸ್ಥಳಾಂತರಗೊಂಡಾಗ ಇವರೂ ಮುಂಬಯಿಗೆ ತೆರಳಿ(1903) ಅಲ್ಲಿಯೇ ನೆಲೆಸಿದರು.

ಇವರು ತಮ್ಮ 50ನೆಯ ವರ್ಷದಲ್ಲಿ ಕನ್ನಡದಲ್ಲಿ ಬರೆವಣಿಗೆ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಆರಂಭಗೊಂಡದ್ದು ಇವರ ಬರೆವಣಿಗೆಗೆ ಸ್ಫೂರ್ತಿಯಾಯಿತು. ಇದೇ ಅವಧಿಯಲ್ಲಿ ಮಂಗಳೂರಿನ ಸ್ವದೇಶಾಭಿಮಾನಿ, ಧಾರವಾಡದ ವಾಗ್ಭೂಷಣ ಮೊದಲಾದ ಪತ್ರಿಕೆಗಳಲ್ಲಿ ಆಂಗ್ಲಕವಿತಾನುವಾದವನ್ನು ಪ್ರಕಟಿಸತೊಡಗಿದರು. ಇಂಥ ಅನುವಾದಗಳ ಸಂಕಲನವೇ ಇವರ ಆಂಗ್ಲಕವಿತಾವಳಿ(1919).

ಭಾಷಾಶಾಸ್ತ್ರ ಮತ್ತು ತತ್ತ್ವಜ್ಞಾನಗಳು ಇವರ ವಿಶೇಷ ಆಸಕ್ತಿಯ ವಿಷಯಗಳಾಗಿದ್ದವು. ಇವರ ಕನ್ನಡ ಕಥಾನಕ, ಕನ್ನಡಭಾಷೆ, ಅದರ ಶಬ್ದಸಂಪತ್ತುಗಳನ್ನು ಕುರಿತು ಮಾಡಿದ ಮೌಲಿಕ ವಿವೇಚನೆಯಾಗಿದೆ. ಕನ್ನಡ ಶಬ್ದಗಳು ದೇಶ್ಯ, ಸಂಸ್ಕøತದ ತದ್ಭವ-ತತ್ಸಮ ಎಂಬಿಷ್ಟೇ ಪರಿಮಿತಿಯಲ್ಲಿವೆ ಎಂದು ತಿಳಿದಿದ್ದ ಆ ಕಾಲದಲ್ಲಿ, ಕನ್ನಡದಲ್ಲಿ ಪ್ರಾಕೃತದಿಂದಲೂ ಸ್ವೀಕೃತವಾಗಿರುವ ಹಲವಾರು ಶಬ್ದ, ಪದಗಳ ಕಡೆಗೆ ಎಲ್ಲರ ಗಮನವನ್ನು ವಿಸ್ತರಿಸಿದರು. ಈ ಎಲ್ಲ ಭಾಷೆಗಳೊಂದಿಗೆ ಮರಾಠಿಯನ್ನೂ ಒಳಗೊಂಡು ಮುಂಬಯಿಯ ಏಷ್ಯಾಟಿಕ್ ಸೊಸೈಟಿಯಲ್ಲಿ ನೀಡಿದ ಇವರ ಭಾಷಣ ಬಹಳ ಮಹತ್ತ್ವದ್ದಾಗಿದೆ. ಇವರ ಮಾತೃಭಾಷೆ ಕೊಂಕಣಿಯಲ್ಲೂ ಚಿಂತನೆ ನಡೆಸಿ ಕೊಂಕಣೀಚೆ ಮೂಲಾದರ್ಶೋ ಎಂಬ ಕೃತಿಯನ್ನು ರಚಿಸಿದ್ದಾರೆ. ಬ್ರಹ್ಮಸಮಾಜದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇವರು ಗಾಯತ್ರಿಮಂತ್ರ, ಭಜನೆಯ ಪದಗಳನ್ನು ಕನ್ನಡದಲ್ಲಿ ತಂದದ್ದು ಮಾತ್ರವಲ್ಲ ಅವುಗಳನ್ನು ಸೊಗಸಾಗಿ ಹಾಡುತ್ತಿದ್ದರು. ಟ್ರಾಕ್ಸ್ ಫಾರ್ ಥಿಂಕರ್ಸ್ ಎಂಬ ಇವರ ಕಿರುಹೊತ್ತಗೆಯೂ ಈ ನಿಟ್ಟಿನದೇ ಆಗಿದೆ.

ಇವರು ಬರೆದದ್ದು ಕಡಿಮೆಯಾದರೂ ಮೌಲ್ಯ ಹಾಗೂ ಸತ್ತ್ವದಲ್ಲಿ ಹಿರಿಯದಾಗಿದೆ. ಇವರ ಅನುವಾದಿತ ಕವಿತೆಗಳಿಗೆ ಐತಿಹಾಸಿಕ ಮಹತ್ತ್ವವಿದೆ. ಇವರ ಆಂಗ್ಲಕವಿತಾವಳಿಯ ವಿಸ್ತøತ ಪ್ರತಿ 1985ರಲ್ಲಿ ಪ್ರಕಟಗೊಂಡಿದೆ(ಪಂಡಿತಾರಾಧ್ಯ). ಇವರ ಗದ್ಯ ಲೇಖನಗಳ ಸಂಪುಟವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಇವರು 1921 ಜೂನ್ 17ರಂದು ನಿಧನರಾದರು.