ಅನಂತವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅನಂತವಾದ''', ಇದು ಜೈನಶಾಸ್ತ್ರರೀತ್ಯ ಪ್ರತಿವಸ್ತುವೂ ಅನಂತಧರ್ಮಗಳನ್ನು ಹೊಂ...
( ಯಾವುದೇ ವ್ಯತ್ಯಾಸವಿಲ್ಲ )

೨೩:೫೯, ೧೧ ಜನವರಿ ೨೦೨೦ ನಂತೆ ಪರಿಷ್ಕರಣೆ

ಅನಂತವಾದ, ಇದು ಜೈನಶಾಸ್ತ್ರರೀತ್ಯ ಪ್ರತಿವಸ್ತುವೂ ಅನಂತಧರ್ಮಗಳನ್ನು ಹೊಂದಿರುವುದು (ಅನಂತಧರ್ಮಾತ್ಮಕಂ ವಸ್ತು) ಎನ್ನುವ ವಾದ. ಅನೇಕಾಂತವಾದಕ್ಕೂ ಸ್ಯಾದ್ವಾದಕ್ಕೂ ಪೂರಕವಾಗಿ ಈ ವಾದ ನಿಂತಿದೆ.[೧]

ಅನಂತವಾದದ ಮೂಲಭೂತ ಪ್ರಕ್ರಿಯೆಗಳು

ಪ್ರತಿಯೊಂದು ವಸ್ತು ಎಲ್ಲಿಯೂ ಇರಬಲ್ಲುದು; ಪ್ರತಿ ವಸ್ತುವಿಗೂ ಇರಬಹುದಾದ ಧರ್ಮಗಳಿಗೆ ಲೆಕ್ಕವಿಲ್ಲ; ಅವು ಅನಂತ. ಅವುಗಳಲ್ಲಿ ಕೆಲವು ಸ್ವಪರ್ಯಾಯ ಧರ್ಮಗಳು; ಉಳಿದವು ಪರಪರ್ಯಾಯ ಧರ್ಮಗಳು. ಸ್ವಪರ್ಯಾಯವೆಂದರೆ ಸತ್ತಾತ್ಮಕವಾದುವು. ಪರಪರ್ಯಾಯವೆಂದರೆ ನಿಷೇಧಾತ್ಮಕವಾದುವು. ಈ ಎರಡರ ಹಂದರದಲ್ಲಿ ಪ್ರತಿಯೊಂದು ವಸ್ತುವೂ ವಿಧವಿಧವಾಗಿ ಕಾಣಬರುತ್ತದೆ. ಈ ಅನಂತಮುಖಗಳನ್ನೂ ಕಲಸಿದರೇನೇ ವಸ್ತುವಿನ ಸ್ವರೂಪ ಸಿದ್ಧವಾಗುವುದು. ಬಟ್ಟೆಯಲ್ಲಿ ದಾರದ ಎಳೆಗಳಿದ್ದಂತೆ ವಸ್ತುವಿನಲ್ಲಿ ಧರ್ಮಗಳು. ಎಳೆ ಎಳೆಗಳನ್ನು ಬಿಡಿಸಿದರೆ ಹೇಗೆ ಬಟ್ಟೆಯಾಗುವುದಿಲ್ಲವೋ ಹಾಗೆಯೇ ಧರ್ಮಗಳಿಂದ ಬೇರ್ಪಟ್ಟು ವಸ್ತುವಿಲ್ಲ.

ಚಿಂತನೆ

ಬಟ್ಟೆ ಒಂದಾದರೂ ಎಳೆಗಳು ಅಸಂಖ್ಯಾತವಾಗಿರುವಂತೆ ಒಂದೇ ವಸ್ತುವಿನಲ್ಲಿ ಅನಂತಧರ್ಮಗಳು ಇರುತ್ತವೆ. ರಾಶಿಯಿಂದ ಪ್ರಯೋಜನವಿಲ್ಲ; ಅವು ಕ್ರಮವರಿತು ವ್ಯವಸ್ಥೆಗೊಂಡಾಗ ಮಾತ್ರ ಬಟ್ಟೆಯೆನಿಸಿಕೊಂಡು ಉಪಯೋಗಕ್ಕೆ ಬರುತ್ತವೆ. ಹಾಗೆಯೆ ಕೇವಲ ಧರ್ಮಗಳು ಅವ್ಯವಹಾರ್ಯ; ಸತ್ತಾತ್ಮಕವಾದ ಧರ್ಮ ಎನ್ನುವಲ್ಲಿ ಸತ್ತು ನಿತ್ಯವೂ ಅಲ್ಲ, ಅನಿತ್ಯವೂ ಅಲ್ಲ. ನಿತ್ಯ ಎಂದರೆ ವ್ಯಯವಿಲ್ಲ; ಅನಿತ್ಯ ಎಂದರೆ ಸ್ಥಿತಿಯಿಲ್ಲ. ನಿತ್ಯ ಅಥವಾ ಅನಿತ್ಯ ಎಂದು ಸಾಧಿಸುವುದು ಏಕಪಕ್ಷೀಯ. ಉತ್ಪತ್ತಿ, ಸ್ಥಿತಿ, ಲಯ ಮೂರೂ ಅವಸ್ಥೆಗಳಲ್ಲಿ ದ್ರವ್ಯ ಇರುತ್ತದೆ ಎಂದು ಪರಿಗಣಿಸುವುದು ಸಾಧುವಾದ ಮತ. ವಸ್ತು ಹೀಗೆ ಅನಂತಧರ್ಮಾತ್ಮಕವಾಗಿರುವಾಗ ಒಂದೇ ಧರ್ಮವನ್ನು ಹಿಡಿದು ವ್ಯವಹರಿಸುವುದು ತಪ್ಪು. ಈ ಏಕಾಂತವಾದವನ್ನು ಜೈನದಾರ್ಶನಿಕರು ನಿರಸನ ಮಾಡಿ ಅನೇಕಾಂತವಾದವನ್ನು ಪೋಷಣೆ ಮಾಡಿದ್ದಾರೆ. ವಸ್ತುವಿನ ಅನಂತಧರ್ಮಗಳನ್ನೂ ಒಮ್ಮೆಲೆ ಕಾಣುವುದು ಸಾಮಾನ್ಯದೃಷ್ಟಿಗೆ ಸಾಧ್ಯವಿಲ್ಲ; ಈ ಕೇವಲ ಙ್ಞಾನ ಅರ್ಹಂತರಿಗೆ ಮಾತ್ರ ಸಾಧ್ಯ. ಸಾಮಾನ್ಯ ವ್ಯವಹಾರದಲ್ಲಿ ಸ್ಯಾದ್ವಾದ ಬಳಕೆಗೆ ಬರುತ್ತದೆ. ಕೆಲವೇ ಧರ್ಮಗಳನ್ನು ಅವಲಂಬಿಸಿ ಅಥವಾ ಗ್ರಹಿಸಿ ಪಾಕ್ಷಿಕವಾದ ಅನುಭವವನ್ನು ಪಡೆದಾಗ ವಸ್ತುವಿನ ಏಕದೇಶವಿಶಿಷ್ಟವಾದ ಸ್ವರೂಪ ತಿಳಿಯುತ್ತದೆ; ಇದಕ್ಕೆ ನಯ ಎಂದು ಹೆಸರು. ಒಂದು ವಿಧವಾಗಿ ನೋಡಿದರೆ ಕಾಣಬಹುದಾದ ಧರ್ಮಗಳು ಮತ್ತೊಂದು ವಿಧವಾಗಿ ನೋಡಿದರೆ ಕಾಣದೆ ಇರಬಹುದು. ಒಂದೊಂದು ದೃಷ್ಟಿವಿಧಕ್ಕೂ ಭಂಗಿ ಎನ್ನುವ ಹೆಸರಿದೆ. [೨]

=ಸಪ್ತಭಂಗನೀಯ

ಜೈನರು ವಸ್ತುವನ್ನು ನೋಡುವ ವಿಧಗಳಲ್ಲಿ ಏಳನ್ನು ಹೇಳಿ ಸಪ್ತಭಂಗನೀಯ ಎನ್ನುವ ಕಲ್ಪನೆಯನ್ನು ಸಿದ್ಧಪಡಿಸಿದ್ದಾರೆ. ಇರಬಹುದು (ಸ್ಯಾತ್ ಅಸ್ತಿ), ಇರದಿರಬಹುದು (ಸ್ಯಾತ್ ನಾಸ್ತಿ) ಇದ್ದೂ ಇರದಿರಬಹುದು (ಸ್ಯಾದಸ್ತಿ ಚ ನಾಸ್ತಿ ಚ) ಹೀಗೆ ಮುಂತಾಗಿ ವಸ್ತುವಿನ ಅನಂತಧರ್ಮಗಳನ್ನು ನಿರ್ದೇಶಿಸುವ ಕ್ರಮ ಜೈನದರ್ಶನಕ್ಕೆ ವಿಶಿಷ್ಟವಾದುದು. ವಿರುದ್ಧವಾದ ಧರ್ಮಗಳು ಒಟ್ಟಿಗೆ ವ್ಯಕ್ತವಾಗುವುದು ಅಸಂಭವವಾದುದರಿಂದ ಸಪ್ತಭಂಗೀನಯದಲ್ಲಿ ಸ್ಯಾದವ್ಯಕ್ತಂ ಎನ್ನುವ ನಯ ಸ್ವಾರಸ್ಯವಾದುದು. ಇರುವ ಎಲ್ಲ ಗುಣಗಳೂ ಎಲ್ಲ ಕಾಲಗಳಲ್ಲೂ ಎಲ್ಲ ದೇಶದಲ್ಲೂ ವ್ಯಕ್ತವಾಗಿರುವುದಿಲ್ಲ. ಕೆಲವೊಮ್ಮೆ ಕೆಲವು ಧರ್ಮಗಳು ಕಾಣಿಸಿಕೊಂಡು ಉಳಿದವು ಹುದುಗಿಯೇ ಇರುತ್ತವೆ. ಬೇರೆ ಸಂದರ್ಭಗಳಲ್ಲಿ ಈ ಅವ್ಯಕ್ತಧರ್ಮಗಳಿಗೆ ಅಭಿವ್ಯಕ್ತಿ ದೊರೆತು ಈಗ ವ್ಯಕ್ತವಾದವು ಅವ್ಯಕ್ತವಾಗಬಹುದು. ಈ ದೃಷ್ಟಿಯಿಂದ ಇರಬಹುದು, ಇರದಿರಬಹುದು, ಇದ್ದೂ ಇರಬಹುದು, ತೋರದೆ ಇರಬಹುದು ಎನ್ನುವ ನಾಲ್ಕು ನೆಲೆಗಳು ಅನಂತವಾದದಲ್ಲಿ ಮುಖ್ಯ ವಿವರಗಳು. ತಾತ್ಪರ್ಯವೇನೆಂದರೆ ಯಾವ ವಸ್ತುವನ್ನಾಗಲಿ ಇದು ಹೀಗೆಯೇ (ಇದಮಿತ್ಥಂ) ಎಂದು ಖಚಿತವಾಗಿ, ಸಾರ್ವಕಾಲಿಕವಾಗಿ, ಸಾರ್ವದೇಶಿಕವಾಗಿ ನಿರ್ಧರಿಸುವುದಾಗಲಿ ನಿರ್ದೇಶಿಸುವುದಾಗಲಿ ಸಾಧ್ಯವಿಲ್ಲ. ಹೆಚ್ಚೆಂದರೆ ಸಂಭವಪ್ರಧಾನವಾಗಿ ಸ್ಯಾತ್ (ಇದ್ದೀತು) ಎನ್ನಬಹುದು ಅಷ್ಟೆ. ಈ ವಾದವನ್ನು ಆತ್ಮತತ್ತ್ವಕ್ಕೆ ಅನ್ವಯಿಸಿ ಆತ್ಮ ಇದೆ, ಆತ್ಮ ಇಲ್ಲ, ಆತ್ಮ ಅವ್ಯಕ್ತ ಎಂಬ ಮೂರು ಪಕ್ಷಗಳನ್ನು ಬೆರೆಸಿ, ತ್ರಿಭಂಗಿಗಳನ್ನು ಸಪ್ತಭಂಗೀನಯದಲ್ಲಿ ನಿಲ್ಲಿಸಬಹುದು ಎಂಬುದು ಜೈನತತ್ತ್ವಪ್ರತಿಪಾದಕರ ನಿಲುವು.[೩]

ಈ ವಾದ ಈಚೆಗೆ ಸಾಪೇಕ್ಷವಾದ (ರಿಲೆಟಿವಿಟಿ) ಮತ್ತು ಸಂಭಾವ್ಯದೃಷ್ಟಿಯಲ್ಲಿ (ಪ್ರಾಬಬಿಲಿಟಿ) ಕೂಡ ಕಂಡುಬರುತ್ತದೆ. ಸಮಗ್ರದೃಷ್ಟಿಯ ಅಸಂಭವ, ಆತ್ಯಂತಿಕ ನಿರ್ಧಾರದ ಅಸಾಧ್ಯತೆ ಇವುಗಳನ್ನು ಮನಗಂಡೇ ಅನಂತವಾದ ಸಿದ್ಧವಾಯಿತು. ಯಾವ ವಸ್ತುವನ್ನಾಗಲಿ ಏಕಾಂತವಾಗಿ, ಏಕಪಕ್ಷೀಯವಾಗಿ, ವರ್ಣಿಸುವುದು ಸಾಧ್ಯವಿಲ್ಲ. ಹೀಗೆ ನಾವು ನಿರ್ದೇಶಿಸುವುದು ಪಾಕ್ಷಿಕದೃಷ್ಟಿ ಎನಿಸಿಕೊಳ್ಳುತ್ತದೆ. ಇದಕ್ಕೆ ವ್ಯತಿರಿಕ್ತವಾದ್ದು ಸಮ್ಯಕ್‍ದೃಷ್ಟಿ. ಇದು ಕೇವಲಿಗಳಿಗೆ ಮಾತ್ರ ಸಾಧ್ಯ. ಉಳಿದವರ ದೃಷ್ಟಿಯೆಲ್ಲ ಸಾಪೇಕ್ಷವಾದುದೇ. ಇಂದ್ರಿಯಜನ್ಯವಾದುದೂ ಅನುಮಾನಾದಿ ಪ್ರಮಾಣಗಳಿಂದ ಲಭ್ಯವಾದುದೂ ಮನಃಪೂರ್ವಕವಾಗಿ ಒದಗುವುದೂ ಸಾಪೇಕ್ಷ ಙ್ಞಾನವೇ. ಯೋಗದಿಂದ ಕಷಾಯಗಳನ್ನು ಹೊರದೂಡಿ, ಇಂದ್ರಿಯವ್ಯಾಪಾರದಿಂದ ವಿರತರಾಗಿ, ಕ್ಲೇಶಗಳಿಂದ ಮುಕ್ತರಾದ ಕೇವಲಿಗಳು ಮಾತ್ರವೇ ನಿರಪೇಕ್ಷವಾದ ಸಮಗ್ರವಾದ ಸನಾತನವಾದ ವಸ್ತು ಙ್ಞಾನವನ್ನು ಯಥಾರ್ಥವಾಗಿ ಪಡೆಯಬಲ್ಲರು. ಹೀಗೆ ವಸ್ತುವನ್ನು ಇರುವಂತೆಯೇ ಗ್ರಹಿಸುವ ದೃಷ್ಟಿ ಸಮ್ಯಕ್‍ದೃಷ್ಟಿ. ವಸ್ತು ಅನಂತಧರ್ಮಾತ್ಮಕವಾದುದೆಂಬುದು ಈ ದೃಷ್ಟಿಯಿಂದಲೇ ತಿಳಿಯುವುದು. ಹೆಚ್ಚಿನ ಮಾಹಿತಿ ಇಲ್ಲಿದೆ.ಅನೇಕಾಂತವಾದ

ಪಾಶ್ಚಾತ್ಯ ದಾರ್ಶನಿಕರಲ್ಲಿಯೂ ವಾಸ್ತವಿಕವಾದಿಗಳು (ರಿಯಲಿಸ್ಟ್ಸ್) ಅನಂತವಾದವನ್ನು ಪ್ರತಿಪಾದಿಸಿದ್ದಾರೆ. ವಿಷಯವಾಸ್ತವಿಕತೆ (ಆಬ್ಜೆಕ್ಟಿವ್ ರಿಯಾಲಿಟಿ) ಎನ್ನುವುದು ಇಂದ್ರಿಯಾಪೇಕ್ಷವಾದುದೆಂದೂ ಇದಕ್ಕೆ ಅತೀತವಾದುದು ಸಾಮಾನ್ಯ (ಯೂನಿವರ್ಸಲ್) ಎಂದೂ ಇವರ ಙ್ಙಾನಮೀಮಾಂಸೆ ಹೇಳುತ್ತದೆ. ಇವರೂ ಧರ್ಮಗಳ ಅನಂತವಾದವನ್ನು ಮುಂದಿಡುತ್ತಾರೆ. ಇವರಲ್ಲಿ ಪ್ರಮುಖರಾದ ದಾರ್ಶನಿಕರೆಂದರೆ ಜೆ.ಇ.ಮೂರ್ ಮತ್ತು ಬರ್ಟ್ರಾನ್ಡ್ ರಸಲ್. ಇವರು ಭಾವವಾದಕ್ಕೆ ವಿರುದ್ಧವಾಗಿ ಸತ್ತಾತ್ಮಕವಾದ ಧರ್ಮಗಳ ಅನುಸಂಧಾನದಲ್ಲಿ ಙ್ಙಾನನದ ಪ್ರಯೋಜನವನ್ನು ಕಾಣುತ್ತಾರೆ. ಜೈನರನ್ನೂ ವಾಸ್ತವಿಕತಾವಾದಿಗಳೆಂದೂ ಅನಂತವಾದಿಗಳೆಂದೂ (ಪ್ಲೂರಲಿಸ್ಟ್ಸ್) ನಿರ್ದೇಶಿಸಬಹುದು. ಭಾರತೀಯ ದರ್ಶನದಲ್ಲಿ ಅನಂತಧರ್ಮವಾದವನ್ನು ಜೈನರು ಪ್ರತಿಪಾದಿಸಿದ ಹಾಗೆ ಉಳಿದ ವಾಸ್ತವಿಕತಾವಾದಿಗಳು ಪ್ರತಿಪಾದಿಸಿಲ್ಲ.

ಉಲ್ಲೇಖಗಳು

  1. https://www.newworldencyclopedia.org/entry/Anekantavada
  2. https://www.britannica.com/topic/syadvada
  3. https://www.speakingtree.in/blog/syadvada-or-theory-of-sevenfold-predications
"https://kn.wikipedia.org/w/index.php?title=ಅನಂತವಾದ&oldid=966556" ಇಂದ ಪಡೆಯಲ್ಪಟ್ಟಿದೆ