ಅವರ ನಿರಂತರ ಓಡಾಟದ ನಡುವೆ 1978ರಲ್ಲಿ ಪೂರ್ಣಪ್ರಜ್ಞಾ ವಿದ್ಯಾ ಪೀಠದ ರಜತೋತ್ಸವವನ್ನು ತಾನೇ ನಿಂತು ವೈಭದಿಂದ ನೆರವೇರಿಸಿದರು.
==ಸಂತ್ರಸ್ತರಿಗೆ ಪರಿಹಾರ==
ಇದೇ ಸಮಯದಲ್ಲಿ ಆಂಧ್ರದ ಚಂಡಮಾರುತಕ್ಕೆ ಬಲಿಯಾಗಿ ಹಂಸಲದೀವಿಯ ಜನ ಮನೆ – ಮಾರು ಕಳೆದುಕೊಂಡು ಬೀದಿಪಾಲಾದರು. ಶ್ರೀಪಾದರ ಹೃದಯ ಕರಗಿತು. ಅವರು ಹಂಸಲದೀವಿಯಲ್ಲಿ ತನ್ನ ಮಠದ ಕಡೆಯಿಂದ 150 ಮನೆಗಳನ್ನು ಕಟ್ಟಿಸಿದರು. ಮನೆ ಕಳೆದುಕೊಂಡವರಿಗೆ ಆಸರೆಯಾಗಿ ನಿಂತರು. ೨೬-೭-೧೯೭೮ರಂದು ಅವುಗಳ ಉದ್ಘಾಟನೆಯಾಗಿ ಮನೆಯಿಲ್ಲದವರು ‘ಮನೆವಂತ’ರಾದರು.
ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹೀಗೆಯೇ ಸಾವಿರಾರು ಮಂದಿ ಬೀದಿಯಲ್ಲಿ ನಿಂತರು. ಆಗಲೂ ಪೇಜಾವರ ಶ್ರೀಪಾದರು ಪ್ರಕೃತಿಯ ಕೋಪಕ್ಕೆ ಬಲಿಯಾದವರ ನೆರವಿಗೆ ನಿಂತರು. ಪೀಠಾಧಿಪತಿ ಸಾಮಾಜಿಕವಾಗಿ ಹೇಗೆ ಸ್ಪಂದಿಸಬೇಕು ಎನ್ನುವುದಕ್ಕೆ ಮಾದರಿಯಾಗಿ ನಿಂತರು. ‘ವ್ಯಸನೇಷು ಮನುಷ್ಯಾಣಾಂ ಭೃಶಂ ಭವತಿ ದುಃಖಿತಃ’ ಎಂದು ರಾಮಾಯಣದ ವಚನಕ್ಕೆ ತಾನೇ ನಿದರ್ಶನವಾಗಿ ನಿಂತರು. ಕೃಶವಾದ ಶರೀರದಲ್ಲೊಂದು ಕರಗುವ ಹೃದಯ; ಜತೆಗೆ ಎಂದೂ ಕರಗದ ಕಠಿಣವಾದ ನಿರ್ಧಾರ.