==ಧಾರ್ಮಿಕ ವಿಧಿಗಳಿಗೆ ಚಾಲನೆ==
:ಕಾರ್ಕಳದಲ್ಲಿ ಬುಧವಾರ ದಿ.21-1-2015 ರಂದು ಬಾಹುಬಲಿ ಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಧಾರ್ಮಿಕ ವಿಧಿಗಳಿಗೆ ಸಂಭ್ರಮದ ಚಾಲನೆ ದೊರಕಿತು.
:ಇಲ್ಲಿನ ಹಿರಿಯಂಗಡಿ ನೇಮಿನಾಥ ಬಸದಿಯಿಂದ ಬೆಳಿಗ್ಗೆ ನೇಮಿನಾಥ ಸ್ವಾಮಿ ಹಾಗೂ ಕೂಷ್ಮಾಂಡಿನಿ ದೇವಿಯ ವಿಹಾರ ಹೊರಟಿತು.
:ದೇವರ ಹೊತ್ತ ಮೆರವಣಿಗೆಯ ಎರಡೂ ಸಾಲುಗಳಲ್ಲಿ ಸಮವಸ್ತ್ರ ಧರಿಸಿ ಪೂರ್ಣಕುಂಭಗಳನ್ನು ಹಿಡಿದ ಸ್ತ್ರೀಯರು, ಚಂಡೆಮದ್ದಲೆ, ನಾಗಸ್ವರ ವಾದನ, ಧ್ವಜಪತಾಕೆಗಳ ಬಿರುದು ಬಾವಲಿಗಳು, ಜೈನಮಠಾಧೀಶ ಲಲಿತಕೀರ್ತಿ ಭಟ್ಟಾರಕ ಸ್ವಾಮಿ, ೧೦೮ ಪ್ರಸಂಗ ಸಾಗರ ಮುನಿಮಹಾರಾಜ, ೧೦೮ ಶ್ರೀ ಪಾವನಕೀರ್ತಿ ಮುನಿಗಳು ಹಾಗೂ ಅಸಂಖ್ಯ ಜನ ಶ್ರಾವಕರು ಭಾಗವಹಿಸಿದರು.
:ಬಾಹುಬಲಿ ಬೆಟ್ಟಕ್ಕೆ ವಿಹಾರ ತಲುಪಿದ ಬಳಿಕ ಮಸ್ತಕಾಭಿಷೇಕದ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ಬೆಟ್ಟದಲ್ಲಿ ಮೊದಲು ಇಂದ್ರ ಪ್ರತಿಷ್ಠೆಯ ವಿಧಿಯಂತೆ ೧೧ ದಿನಗಳ ಧಾರ್ಮಿಕ ಮಹೋತ್ಸವದ ಪುರೋಹಿತರನ್ನು ಆಹ್ವಾನಿಸುವ ಪ್ರಕ್ರಿಯೆ ನಡೆಯಿತು. ತೋರಣ ಮುಹೂರ್ತ ನಡೆದ ನಂತರ ವಿಮಾನ ಶುದ್ಧಿ(ಪರಿಸರ ಶುದ್ಧಿಗೊಳಿಸುವಿಕೆ) ನಡೆಯಿತು.
:ಮಧ್ಯಾಹ್ನ ಚೈತ್ಯಾಲಯಕ್ಕೆ ಹೊದಿಸಿದ ಮುಖವಸ್ತ್ರ ಉದ್ಘಾಟನೆ ನಡೆದ ಬಳಿಕ ನಾಂದಿಮಂಗಲ ಪೂಜೆ, ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ, ಗ್ರಾಮ ಬಲಿವಿಧಾನ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣ ಮೊದಲಾವು ಕ್ರಮವಾಗಿ ನಡೆದವು. ಬೆಟ್ಟದ ಎಡಭಾಗದಲ್ಲಿರುವ ಯಜ್ಞಶಾಲೆಯಲ್ಲಿ ಸ್ಥಾಪಿಸಲಾದ ಶ್ರೀಪೀಠದಲ್ಲಿರುವ ದೇವರ ಮೂರ್ತಿಗೆ, ಯಕ್ಷ ಪೀಠದಲ್ಲಿರುವ ಸರ್ವಾಹ್ಣ ಯಕ್ಷಮೂರ್ತಿಗೆ, ನಾಂದಿಪೀಠದಲ್ಲಿ ಸ್ಥಾಪಿಸಲಾದ ೯ ಕಲಶಗಳಿಗೆ, ಪಾಂಡುಕ ಶಿಲೆಯಲ್ಲಿರುವ ಜಿನಬಿಂಬಕ್ಕೆ ಅಭಿಷೇಕ ನಡೆದವು.
:ಅಂಕುರಾರ್ಪಣ ವಿಧಿಯಂತೆ ಕಡಲೆ, ಹೆಸರು, ಹುರುಳಿ, ತೊಗರಿ, ಗೋಧಿ, ಭತ್ತ ಹಾಗೂ ಅವರೆ ಮುಂತಾದ ೯ಬಗೆಯ ಧಾನ್ಯಗಳನ್ನು ಮೊಳಕೆಗೆ ಹಾಕಲಾಯಿತು. ತೀರ್ಥಂಕರ ಕುಂಡ, ಮುನಿ ಕುಂಡ, ಗಣಧರ ಕುಂಡ ಹಾಗೂ ಪಾಂಡುಕ ಶಿಲೆಗಳಲ್ಲಿ ಪೂಜಾವಿಧಿ ನಡೆದವು. ಸಮಸ್ತ ಭಕ್ತಜನರ ಸಂಭ್ರಮದ ಭಾಗವಹಿಸುವಿಕೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಪ್ರತಿಷ್ಠಾ ಪುರೋಹಿತ ಹಿರಿಯಂಗಡಿಯ ನಾಗಕುಮಾರ ಇಂದ್ರ ಅವರ ನೇತೃತ್ವದಲ್ಲಿ ಆರಂಭಗೊಂಡವು. ಪ್ರಧಾನ ಪುರೋಹಿತರ ಜೊತೆಗೆ ಬೆಟ್ಟದ ಪುರೋಹಿತ ನಾಗರಾಜ ಇಂದ್ರ ಹಾಗೂ ಇತರ ೨೧ ಮಂದಿ ಇಂದ್ರರು ಪೂಜಾ ವಿಧಾನಗಳಲ್ಲಿ ಭಾಗವಹಿಸಿದರು.<sup>[೧]</sup>
==ಸಂಸ್ಕೃತಿ==
|