ಶ್ರೀ ಕ್ಷೇತ್ರ ನಾಗಮಲೆಯು ಮಹದೇಶ್ವರ ಸ್ವಾಮಿ ಸನ್ನಿಧಿಯಿಂದ ಸುಮಾರು ೧೫ ಕಿ ಮೀ ದೂರದಲ್ಲಿದ್ದು ಭಕ್ತರ ಪ್ರಮುಖ ಭಕ್ತಿಯ ತಾಣವಾಗಿ ಹೆಸರುವಾಸಿಯಾಗಿದೆ. ಎಪ್ಪತ್ತೇಳು ಮಲೆಗಳ ನಾಡು ಎಂದು ಹೆಸರಾಗಿರುವ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ನಾಗಮಲೆಯು ಒಂದು ಪ್ರಮುಖ ಹಾಗೂ ವಿಶಿಷ್ಟ ಆಧ್ಯಾತ್ಮ ಸ್ಥಳವಾಗಿದೆ. ಶ್ರೀ ಮಹದೇಶ್ವರ ಸ್ವಾಮಿಯ ವಿಗ್ರಹವು ಕಲ್ಲಿನ ರೂಪದಲ್ಲಿದ್ದು ಅದಕ್ಕೆ ನೆರಳಾಗಿರುವ ಹಾವಿನ ಹೆಡೆಯ ಕಲ್ಲಿನ ಚಿತ್ರಣ ಎಂಥವರನ್ನು ಒಮ್ಮೆ ಭಕ್ತಿಯ ಅಲೆಯಲ್ಲಿ ತೇಲಾಡುವಂತೆ ಮಾಡುತ್ತದೆ. ಬೆಟ್ಟಗಳ[[ಬೆಟ್ಟ]]ಗಳ ನಡುವೆ ಇರುವ ಈ ಕ್ಷೇತ್ರಕ್ಕೆ ತಲುಪಲು ಕಾಲುದಾರಿಯೇ ಆಶ್ರಯ, ಯಾವುದೇ ವಾಹನ ಸಂಚಾರಕ್ಕೂ ಅವಕಾಶವಿಲ್ಲದ ಈ ಕ್ಷೇತ್ರಕ್ಕೆ ಅಮವಾಸ್ಯೆ ಹುಣ್ಣಿಮೆಯ ದಿನದಂದು ಭಕ್ತರ ದಂಡೆ ನಡೆದುಕೊಂಡು ಕ್ಷೇತ್ರವನ್ನು ತಲಪುತ್ತಾರೆ ಭಕ್ತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಭಾಜನರಾಗುತ್ತಾರೆ. ಸುತ್ತಲೂ ದುರ್ಗಮವಾದ ಅರಣ್ಯವಿದ್ದು ತುಂಬಾ ಕಠಿಣವಾದ ಈ ತಾಣವು ಹಲವು ಕಾಡು ಪ್ರಾಣಿಗಳ ಆವಾಸ ಸ್ಥಾನವು ಹೌದು ಆದರೂ ಇಲ್ಲಿಗೆ ಬರುವ ಭಕ್ತರಿಗೆ ಯಾವುದೇ ಪ್ರಾಣಿಯ ತೊಂದರೆ ಇಲ್ಲದಿರುವುದು ಈ ಕ್ಷೇತ್ರದ ಮಹಿಮೆಯನ್ನು ಸಾರುತ್ತದೆ.ಮುಖ್ಯವಾಗಿ ಈ ಕ್ಷೇತ್ರವನ್ನು ತಲುಪ ಬೇಕಾದರೆ ಏಳು ಬೆಟ್ಟಗಳನ್ನು ಏರಿ ಇಳಿಯಬೇಕು. ಒಂದೊಂದು ಬೆಟ್ಟಗಳು ಸುಮಾರು ೧೦೦೦ ಮೀ ನಷ್ಟು ಎತ್ತರವಾಗಿದ್ದು ಅದನ್ನು ಲೆಕ್ಕಿಸದೆ ಭಕ್ತರ ಸಮೂಹವೇ ಈ ಕ್ಷೇತ್ರವನ್ನು ತಲುಪುವ ಪರಿ ನೋಡಿದರೆ ಭಕ್ತಿಯ ಅರ್ಥ ಏನೆಂಬುದು ತಿಳಿಯುತ್ತದೆ.ಶ್ರೀ ಕ್ಷೇತ್ರ ನಾಗಮಲೆಯು ಸುಮಾರು ೮೦೦ ಮೀ ನಷ್ಟು ಎತ್ತರವಿರುವ ಒಂದು ಬೆಟ್ಟ ಇದರ ಮೇಲೆ ದೇವಸ್ಥಾನವಿದ್ದು ಬೆಟ್ಟದ ತುದಿಯಲ್ಲಿ ಕಾಣಸಿಗುವ ಸುಂದರವಾದ ಪರಿಸರದ ಜೊತೆಗೆ ಕಾವೇರಿ ನದಿಯು ತಮಿಳುನಾಡಿನ ಮೆಟ್ಟೂರು ಜಲಾಶಯವನ್ನು ಸೇರುವ ರೌದ್ರ ರಮಣೀಯವಾದ ದೃಶ್ಯ ದಣಿದು ಬಂದ ಭಕ್ತರ ಮನಸ್ಸಿಗೆ ಮುದ ನೀಡಿ ಭಕ್ತರ ದಣಿವನ್ನು ಹೋಗಲಾಡಿಸುತ್ತದೆ.