ಮಕ್ಕಳ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
No edit summary
೧ ನೇ ಸಾಲು:
'''ಕನ್ನಡದಲ್ಲಿ ಮಕ್ಕಳ ಸಾಹಿತ್ಯ'''
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ೨೦ನೆಯ ಶತಮಾನ ಅತ್ಯಂತ ವಿಶಿಷ್ಟವಾದದ್ದು. ಈ ಸಂದರ್ಭದಲ್ಲಿ ಮಹಾಕಾವ್ಯ, ಭಾವಗೀತೆ, ಸಣ್ಣಕತೆ, ಕಾದಂಬರಿ, ಪ್ರಬಂಧ, ನಾಟಕ, ವಿಚಾರಸಾಹಿತ್ಯ ಮೊದಲಾದವುಗಳನ್ನು
ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಇವುಗಳಲ್ಲಿ 'ಮಕ್ಕಳ ಸಾಹಿತ್ಯ'ವೂ ಗಮನಾರ್ಹವಾದುದು.
'ಮಕ್ಕಳ ಸಾಹಿತ್ಯ' ಎಂದರೆ "ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ.
" ಕನ್ನಡದಲ್ಲಿ ಈ ಉದ್ದೇಶವನ್ನು ಈಡೇರಿಸುವಂಥ ಸಾಹಿತ್ಯ ಇತ್ತಾದರೂ, ಅದಕ್ಕೆ 'ಮಕ್ಕಳ ಸಾಹಿತ್ಯ'ವೆಂಬ ಸ್ಪಷ್ಟರೂಪ ಬಂದದ್ದು ಆಧುನಿಕ ಶಿಕ್ಷಣ ಹಾಗೂ ನವೋದಯ ಸಾಹಿತ್ಯ ಸಂದರ್ಭದಲ್ಲಿ ಎನ್ನಬಹುದು.
ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿ ಹೇಳುವ ಲಾಲಿಪದಗಳು, ಪ್ರಾಸಬದ್ಧವಾದ ಆಟದ ಪದಗಳು, ಒಗಟುಗಳು, ಕಥೆಗಳು,
ಅದರಲ್ಲೂ ರಾಜಕುಮಾರಿಯರ ಕಥೆ, ಅದ್ಭುತರಮ್ಯ ಕಥೆ, ಕಾಗಕ್ಕ ಗುಬ್ಬಕ್ಕನಕಥೆ, ಪಂಚತಂತ್ರದ ಕಥೆ-ಇವೆಲ್ಲ ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸಿವೆ. ಆದರೂ ಆಧುನಿಕ ಕಾಲದಲ್ಲಿ ಮುದ್ರಣ ಕಲೆ ಬಂದ
ಮೇಲೆ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಕನ್ನಡದ ಪ್ರಸಿದ್ಧ ಕವಿಗಳನೇಕರು ಮಕ್ಕಳ ಮನಸ್ಸನ್ನು ಪ್ರವೇಶಿಸಿ, ಅವರಿಗೆ ಇಷ್ಟವಾಗುವಂಥ ಸಾಹಿತ್ಯ ರಚಿಸಿದರು. ಪತ್ರಿಕಾ ಮಾಧ್ಯಮ ಇದಕ್ಕೆ ಪ್ರಚಾರ ನೀಡಿತು.
ಅದರ ಫಲವಾಗಿ ಕವಿತೆಗಳು, ಕಥೆಗಳು, ನಾಟಕ, ವಿಜ್ಞಾನ ಬರಹಗಳು, ಆದರ್ಶ ವ್ಯಕ್ತಿಗಳನ್ನು ಕುರಿತ ಬರಹಗಳು ಬಂದು ಮಕ್ಕಳ ಮನೋಲೋಕವನ್ನು ಅರಳಿಸಿದವು. ಪ್ರಸ್ತುತ ಪ್ರಬಂಧಗಳಲ್ಲಿ ಮಕ್ಕಳ
ಸಾಹಿತ್ಯದ ಪ್ರಮುಖ ಆಕರ್ಷಣೆಯಾದ ಕವಿತೆ, ಕಥೆ, ನಾಟಕಗಳನ್ನು ಕುರಿತು ಪ್ರಸ್ತಾಪಿಸಿದ್ದೇವೆ.
'''ಕವಿತೆಗಳು:'''
ಜಾನಪದ ಪರಂಪರೆಯನ್ನು ಬಿಟ್ಟರೆ, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿನ ಮಕ್ಕಳಕವಿತೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಜಾನಪದ ಪರಂಪರೆಯ 'ಗೋವಿನ ಹಾಡು' ಕವಿತೆ,
೧೫ನೇ ಶತಮಾನದ ಮುಪ್ಪಿನ ಷಡಕ್ಷರಿಯ 'ತಿರುಕನ ಕನಸು' ಬಹಳ ಕಾಲಗಳಿಂದಲೂ ಮಕ್ಕಳ ಮನಸ್ಸನ್ನು ಸೂರೆಗೊಂಡ ಜನಪ್ರಿಯ ಕವಿತೆಗಳು.
೧೯ನೇ ಶತಮಾನದ ಹೊತ್ತಿಗೆ ಇಂಗ್ಲೀಷ್ ಕವಿತೆಗಳ ಅನುವಾದಗಳು ಮಕ್ಕಳ ಸಾಹಿತ್ಯವನ್ನು ಬೆಳೆಸಿದವು. ಇಂಗ್ಲೀಷಿನ Twinkle Twinkle Little Star ಕವಿತೆಯನ್ನು ಶ್ರೀನಿವಾಸರಾವ್ ರವರು ಬಾಲಬೋಧೆಯಲ್ಲಿ,
ಮಿರುಮಿರುಗುವ ಹಾ ಕಿರುತಾರಗೆಯೆ
ಅರಿಯೆನು ನಾನೆಲೆ ನೀನಾರೋ
ಧರೆಗಿಳಿಯದೆ ನೀ ನಿರುತಿಹೆ ದೂರದಿ
ನೆರೆ ಹೊಳೆಯುವ ವಜ್ರದ ತೆರದಿ
ಎಂದು ಅನುವಾದಿಸಿ, ಮಕ್ಕಳ ಕವಿತೆ ಬಗ್ಗೆ ಹೊಸ ಅಭಿರುಚಿ ಮೂಡಿಸಿದರು. ಅನಂತರದ ಕಾಲದಲ್ಲಿ, ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಹಾಡುವ ಗುಣವುಳ್ಳ ಕವಿತೆಗಳು ಬಂದವು.
ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು
ಇಂಥ ಸರಳತೆ, ನೀತಿ, ಆದರ್ಶ ಮೌಲ್ಯಗಳು ಕವಿತೆಗಳಲ್ಲಿ ಮೂಡಿಬಂದವು. ಎಂ.ಎಸ್.ಪುಟ್ಟಣ್ಣನವರು, ಎಸ್.ಜಿ.ನರಸಿಂಹಚಾರ್ಯರು, ಶಾಂತಕವಿಗಳು ಮೊದಲಾದವರು ಇಂಥ ಪದ್ಯಗಳನ್ನು ಪಠ್ಯಪುಸ್ತಕಗಳಾಗಿ ರಚಿಸಿ,
ಸಾಹಿತ್ಯದ ಕಡೆ ಮಕ್ಕಳ ಒಲವು ಬೆಳೆಯುವಂತೆ ಮಾಡಿದರು. ಅನಂತರದಲ್ಲಿ ಪಂಜೆಮಂಗೇಶರಾಯರು ಮಕ್ಕಳ ಮನಸ್ಸಿನ ಸೂಕ್ಷ್ಮ ಸಂವೇದನೆಯನ್ನು ಅರ್ಥಮಾಡಿಕೊಂಡು, ಸರಳ ಸುಂದರ ಗೀತೆಗಳನ್ನು ರಚಿಸಿದರು.
'ಶಿಶು ಸಾಹಿತ್ಯದ ಜನಕ'ರೆಂದೇ ಪ್ರಸಿದ್ಧರಾದರು. ಅವರು ಬರೆದ ಕವಿತೆಗಳು ಇಂದಿಗೂ ಜನಪ್ರಿಯವಾಗಿವೆ.
ಮೂಡುವನು ರವಿ ಮೂಡುವನು
ಕತ್ತಲೊಳಗೆ ಜಗಳಾಡುವನು
ಮೂಡಣ ರಂಗಸ್ಥಳದಲಿ ನೆತ್ತರು
ಮಾಡುವನು,ಕುಣಿದಾಡುವನು (ಉದಯರಾಗ )
*
ನಾಗರ ಹಾವೇ! ಹಾವೊಳು ಹೂವೇ!
ಬಾಗಿಲ ಬಿಲದಲಿ ನಿನ್ನಯ ಠಾವೇ?
ಕೈಗಳ ಮುಗಿವೆ, ಹಾಲನ್ನೀವೆ!
ಬಾ ಬಾ ಬಾ ಬಾ ಬಾ ಬಾ ಬಾ ಬಾ
ಇಂಥ ಕವಿತೆಗಳು ಮಕ್ಕಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಆ ಕಲ್ಪನೆ, ಲಯ, ಶ್ರಾವ್ಯಗುಣಗಳಿಂದ ಈ ಪದ್ಯಗಳು ಮಕ್ಕಳ ಬಾಯಲ್ಲಿ ಕುಣಿದಾಡಿದವು.
ಇದೇ ರೀತಿಯಲ್ಲಿ ಎಂ.ಎನ್.ಕಾಮತ್ ಹೊಯಿಸಳರು ಮಕ್ಕಳ ಮನಸ್ಸನ್ನು ಕವಿತೆಗಳಲ್ಲಿ ತಣಿಸಿದರು. ಹೊಯಿಸಳರ 'ಬಂದಾ ಬಂದಾ ಸಂತಮ್ಮಣ್ಣ' 'ನಂಗೊತಿಲ್ಲಪ್ಪ' ಇಂಥ ಕವಿತೆಗಳನ್ನು ಕೇಳದವರೆ ಇಲ್ಲ.
'ಮಕ್ಕಳ ಸಾಹಿತ್ಯವೆಂದರೆ ಜಿ.ಪಿ.ರಾಜರತ್ನಂ, ರಾಜರತ್ನಂ ಎಂದರೆ ಮಕ್ಕಳ ಸಾಹಿತ್ಯ' ಎಂದು ಹೇಳುವಷ್ಟು ಹಿರಿಮೆ ಮಕ್ಕಳ ಸಾಹಿತ್ಯದಲ್ಲಿ ರಾಜರತ್ನಂ ಅವರದ್ದು. ಅವರ ಕವಿತೆಗಳು ಎಷ್ಟರಮಟ್ಟಿಗೆ ಎಲ್ಲರ ಗಮನ ಸೆಳೆದಿದೆಯೆಂದರೆ,
ಇವತ್ತೂ ವಯಸ್ಸಾದವರು ಚಿಕ್ಕಂದಿನ್ನಲ್ಲಿ ತಾವೂ ಕಲಿತ ರಾಜರತ್ನಂ ಕವಿತೆಗಳನ್ನು ಬೊಚ್ಚು ಬಾಯಲ್ಲಿ ಗುನುಗುತ್ತಿರುವ ಅಜ್ಜಂದಿರನ್ನು ಕಂಡಿದ್ದೇವೆ. ಉತ್ತಮ ಮಕ್ಕಳ ಸಾಹಿತ್ಯ ಎಂದರೆ ಹೇಗಿರಬೇಕು ಎನ್ನುವುದಕ್ಕೆ ಅವರ ಕವಿತೆಗಳು ಮಾದರಿಯಾಗಿವೆ.
"ಬಣ್ಣದ ತಗಡಿನ ತುತ್ತೂರಿ ಕಾಸಿಗೆಕೊಂಡನು ಕಸ್ತೂರಿ" ಎಂಬ 'ತುತ್ತೂರಿ' ಕವಿತೆಯಾಗಲಿ 'ಕಡಲೆಪುರಿ' ಕವಿತೆಯಾಗಲಿ ಕೇಳುವುದೆಂದರೆ ಮಕ್ಕಳಿಗೆ ಹಬ್ಬ.
ಮಕ್ಕಳ ಕವಿತೆಗಳಿಗೆ ಒಂದು ಹೊಸ ಶಕ್ತಿಯನ್ನು, ಸತ್ವವನ್ನು ನೀಡಿದವರು ಡಾ.ಶಿವರಾಮಕಾರಂತರು. ಕಾರಂತರು 'ಬಾಲವನ'ದ ಮೂಲಕ ಮಾಡಿದ ಮಕ್ಕಳ ಸಾಹಿತ್ಯದ ಪ್ರಯೋಗ, ಕವಿತೆಗಳಿಗೆ ಮಾತ್ರ ಸೀಮಿತವಾದದ್ದಲ್ಲ.
ಡಂಡಂ ಡೋಲು, ಕಪ್ಪೆಭಟ್ಟರು, ತಿನ್ನದದೇವರು ಮೊದಲಾದ ಅವರ ಕವಿತೆಗಳು ಜನಪ್ರಿಯವಾಗಿವೆ. ಈ ಕವಿತೆಗಳಲ್ಲಿ ಮಕ್ಕಳ ಭಾವನೆ-ಕಲ್ಪನೆಗಳಿಗೆ ಮಾತ್ರ ಕಾರಂತರು ಮಹತ್ವ ಕೊಡಲಿಲ್ಲ. ಅವರ ಮನಸ್ಸಿನಲ್ಲಿ ಪ್ರಶ್ನೆಗಳನ್ನು, ತರ್ಕಗಳನ್ನು , ಚುರುಕುತನವನ್ನು, ತಮ್ಮ ಕವಿತೆಗಳ ಮೂಲಕ ಮೂಡಿಸಿದರು. 'ತಿನ್ನದ ದೇವರು' ಎಂಬ ಕವಿತೆ ಇದಕ್ಕೆ ಉದಾಹರಣೆ
ಅಮ್ಮನು ನಿತ್ಯವು ಅನ್ನವ ತಂದು
ದೇವರ ಮುಂದಕೆ ಇರಿಸುತ್ತಾಳೆ,
ದೇವರು ಏನನು ತಿಂದುದೆ ಇಲ್ಲ
ಅಮ್ಮನು ತರುವುದ ಬಿಡುವಂತಿಲ್ಲ
- - - - - - - - - - - -
ತಿಂಬುವ ದೇವರು ಅಮ್ಮಗೆ ಸಲ್ಲ
ತಿನ್ನದ ದೇವರ ನಂಬುವಳಲ್ಲ!
ಇಂಥ ಕವಿತೆಗಳು ಇಂದಿಗೂ ಪ್ರಸ್ತುತವಾಗಿವೆ.
ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರಕವಿ ಕುವೆಂಪು ಅವರನ್ನು ನೆನೆಯಲೇಬೇಕು. 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯ ಬರೆದ ಕವಿ 'ಕಿಂದರ ಜೋಗಿ'ಯಂಥ ಶಿಶುಗೀತೆಯನ್ನು ರಚಿಸಿದ್ದಾರೆ.
'ಕಿಂದರ ಜೋಗಿ' ಬ್ರೌನಿಂಗ್ ಕವಿಯ 'ಪೈಡ ಪೈಪರ್ ಆಫ್ ಹ್ಯಾಮಲಿನ್' ಎಂಬ ಕವಿತೆಯ ರೂಪಾಂತರ ಆದರೂ ಇದು ಕನ್ನಡದ ಮಣ್ಣಿ ನ ಕವಿತೆ ಎಂದೇ ಎಲ್ಲ ಮಕ್ಕಳ ಗಮನ ಸೆಳೆದಿದೆ.
ದೃಶ್ಯ ಮಾಧ್ಯಮಕ್ಕೂ ಇದನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. 'ಕಿಂದರಿ ಜೋಗಿ' ನಾಟಕದಲ್ಲಿನ ನಾಟಕೀಯ ದೃಶ್ಯಗಳು, ಲಯ-ಸಂಗೀತ ಮಕ್ಕಳನ್ನು ಸೆರೆ ಹಿಡಿದು ಬಿಟ್ಟಿದೆ.
ಬಂದನು ಬಂದನು ಕಿಂದರಿ ಜೋಗಿ!
ಕಡವೆಯ ಕೊಂಬಿನ ತಲೆಯಾ ಜೋಗಿ!
ಆನೆಯ ಕಿವಿಗಳ ಕಿಂದರಿ ಜೋಗಿ!
ಹಂದಿಯ ದಾಡೆಯ ಕೋರೆಯ ಜೋಗಿ.
ಇಂಥ ಜೋಗಿಯ ಚಿತ್ರ ಮಕ್ಕಳಲ್ಲಿ ಭಯ, ಕುತೂಹಲ, ಕಲ್ಪನಾಶಕ್ತಿಗಳನ್ನು ಮೂಡಿಸುತ್ತದೆ. ಈ ಪದ್ಯ ಕೇಳಿದ ಮಕ್ಕಳು 'ಜೋಗಿ' ಎಂದರೆ ಕುವೆಂಪು ಅವರ ವರ್ಣನೆಯ ಜೋಗಿಯನ್ನೇ ನೆನೆಪಿಸಿಕೊಳ್ಳುತ್ತಾರೆ.
ಕವಿತೆಯಲ್ಲಿ ಬರುವ ಇಲಿಗಳ ಸಮೂಹ - ಜೋಗಿಯ ಸಂಗೀತಕ್ಕೆ ಮಾರುಹೋಗುವುದು, ಮುಂದೇನಾಗುತ್ತದೆ ಎಂಬ ಕುತೂಹಲ ಬೆಳೆಸುವುದು - ಇವೆಲ್ಲ ಒಂದು ಅದ್ಭತ ಮಾಯಾ ಪ್ರಪಂಚವನ್ನು ತೆರೆದಿಡುತ್ತದೆ.
ಕೊನೆಗೆ ಜೋಗಿ ಮಕ್ಕಳ ಗೆಳೆಯನೆ ಆಗಿ ಬಿಡುತ್ತಾನೆ. ಇಂಥಹ ಕವಿತೆಯನ್ನು ಮಕ್ಕಳಿಗೆ ಕಲಿಸದಿದ್ದರೆ ಮಕ್ಕಳ ಮನಸ್ಸು ಅರಳಲಾರದು. ಇದಲ್ಲದೆ ಕುವೆಂಪುರವರ 'ಕನ್ನಡ', 'ಅರ್ಧಚಂದ್ರ', 'ಗುರು', ಮೂರ್ತಿಯ ಚಂದ್ರ',
'ಟುವ್ವಿ ಟುವ್ವಿ' ಮೊದಲಾದ ಕವಿತೆಗಳು ಆಕರ್ಷಕವಾಗಿವೆ. ಈ ಕವಿತೆಗಳಲ್ಲಿ ಲಯ, ಗೇಯತೆಯ ಜೊತೆಗೆ, ಮತ್ತೊಂದು ವಿಶೇಷವೆಂದರೆ ಪ್ರಕೃತಿಯ ಒಂದೊಂದು ಅಂಶದ ಕಡೆಗೂ ಮಕ್ಕಳ ಗಮನ ಸೆಳೆದು ಅವರಲ್ಲಿ 'ಪ್ರಕೃತಿ ಪ್ರೀತಿ'
ಬೆಳೆಯುವಂತೆ ಮಾಡುತ್ತಾರೆ.
ದೇವರ ಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವು ಪೆಪ್ಪರಮೆಂಟಮ್ಮಾ! (ಅರ್ಧಚಂದ್ರ)
ಇದೇ ಪರಂಪರೆಯಲ್ಲಿ, ಸಿದ್ದಯ್ಯ ಪುರಾಣಿಕರ 'ಅಜ್ಜನ ಕೋಲಿದು ನನ್ನಯ ಕುದುರೆ' ('ನನ್ನ ಕುದುರೆ' ಕವಿತೆ), ಎನ್. ಶ್ರೀನಿವಾಸ್ ಉಡುಪರ 'ಕುಂಬಕರ್ಣನ ನಿದ್ದೆ', ಡಾ.ಎನ್.ಎನ್.ಲಕ್ಷ್ಮೀನಾರಾಯಣಭಟ್ಟರ,
ಹೆಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆಗಳು ಗಮನಿಸಬೇಕಾದವು.
'ಬಾಳ ಒಳ್ಳೇವ್ರು ನಮ್ಮಿಸ್ಸು', 'ಗೇರ್ ಗೇರ್ ಮಂಗಣ್ಣ' ಇಂಥ ಕವಿತೆಗಳನ್ನು ಹಾಡಿ ಕುಣಿಯದ ಮಕ್ಕಳೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯವನ್ನು ಮಕ್ಕಳೇ ಸ್ವತಃ ತಮ್ಮ ಕಲ್ಪನೆಯಲ್ಲಿ ಹರಿಯಬಿಡುತ್ತಾರೆ.
ಮಕ್ಕಳ ಮುಗ್ಧತೆಯನ್ನು ಸರಳ-ಸುಂದರವಾಗಿ ತಮ್ಮ ಕವಿತೆಗಳಲ್ಲಿ ಹೇಳುವ ಮೂಲಕ ತಮ್ಮ ಸಾಹಿತ್ಯಾಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡದಲ್ಲಿ ಸಮೃದ್ಧವಾದ 'ಮಕ್ಕಳ ಸಾಹಿತ್ಯ' ರಚನೆಯಾಗಿದೆ. ಈ ಸಾಹಿತ್ಯಕ್ಕೆ 'ಪತ್ರಿಕಾ ಮಾಧ್ಯಮ' ಪ್ರೋತ್ಸಾಹವನ್ನು ನೀಡುತ್ತಿದೆ. ಆದರೂ ಮಕ್ಕಳು ಇದರ ಪ್ರಯೋಜನವನ್ನು ಸರಿಯಾಗಿ ಪಡೆದುಕೊಳ್ಳುತ್ತಿಲ್ಲವೆಂದು ಹೇಳಲು
ವಿಷಾದವೆನಿಸುತ್ತದೆ.
ಇದಕ್ಕೆ ಮುಖ್ಯ ಕಾರಣ ಇಂದಿನ ವಿದ್ಯಾಭ್ಯಾಸ. ಮಕ್ಕಳ ಮನಸ್ಸನ್ನು ತಟ್ಟುವ ಮಾತೃಭಾಷೆಯ (ಕನ್ನಡ) ಪದ್ಯಗಳಿಗಿಂತ ಇಂಗ್ಲೀಷ್ ರೈಮ್ಸ್ ನ್ನೇ ತರಗತಿಯಲ್ಲಿ ಬೋಧನೆ ಮಾಡುವ ಮೂಲಕ ಪುಟ್ಟ ಹೃದಯಕ್ಕೆ ಸಿಗಬಹುದಾದ
ಆನಂದಕ್ಕೆ ಪೆಟ್ಟುಬೀಳುತ್ತಿದೆ. ಇದರಲ್ಲಿ ಪೋಷಕರೂ ಪಾಲುದಾರುರೇ. ಅಲ್ಲದೇ ವಿದ್ಯುನ್ಮಾನ ಮಾಧ್ಯಮಗಳಿಗೆ ಮಾರುಹೋದ ಮಕ್ಕಳು ಕವಿತೆಗಳ ಭಾವ ಪ್ರಪಂಚದಿಂದ ವಂಚಿತರಾಗಿ ಯಾಂತ್ರಿಕವಾಗುತ್ತಿದ್ದಾರೆ.
ಹೀಗಾಗಿ ಅವರಲ್ಲಿ ಆದರ್ಶ, ಕಲ್ಪನೆ, ಹೃದಯವಂತಿಕೆಗಳು ಕಡಿಮೆಯಾಗುತ್ತಿವೆ. ಆಧುನಿಕ ವಿದ್ಯಾಭ್ಯಾಸದ ಜೊತೆ ಜೊತೆಗೆ ಮಕ್ಕಳಲ್ಲಿ ಈ ಕವಿತೆಗಳ ಆಸ್ವಾದನೆಯ ರುಚಿ ತಿಳಿಸಿಕೊಟ್ಟರೆ ಅವರು ಇನ್ನೂ ಉತ್ತಮ ರೀತಿಯಲ್ಲಿ
ವಿದ್ಯಾವಂತರೂ-ಹೃದಯವಂತರೂ ಆಗುತ್ತಾರೆಂದೇ ದೃಢವಾಗಿ ಹೇಳಬಹುದು.
===== ನಾಟಕ =====
ನಾಟಕವು ನಟರು ಅಭಿನಯಿಸಬಹುದಾದ ರೀತಿಯಲ್ಲಿ ರಚಿಸಲ್ಪಡುವ ಒಂದು ಸಾಹಿತ್ಯ ಪ್ರಕಾರ ನಾಟಕದ ಅಭಿನಯವು ಒಂದು ರಂಗಕಲೆಯ ವಿಧಿ.
===== ಮಕ್ಕಳ ನಾಟಕ=====
ಹಿಂದಿನ ಕಾಲದಲ್ಲಿ ಮಕ್ಕಳಿಗೆ ಮೂಲವಾದ ಮನೋರಂಜನೆ ಎಂದರೆ ನಾಟಕ.ನಾಟಕಗಳಿಂದ ಮಕ್ಕಳು ಜೀವನದ ಮೌಲ್ಯಗಳನ್ನು ಕಲಿಯುತ್ತಿದರು ಹಾಗು ಸರಿ ತಪ್ಪು ವಿನ ವ್ಯತ್ಯಾಸವನು ತಿಳಿಯುತ್ತಿದರು.
ನಾಟಕಗಳಿಂದ ಮಕ್ಕಳ ವರ್ತನೆಗಳು ಬದಲಾದವು.ಮಕ್ಕಳ ಮನಸ್ಸು ಸೂಕ್ಷಮವಾದ್ದುದು,ಆದರಿಂದ ನಾಟಕ ಮಕ್ಕಳ ಮನಸ್ಸಿನಲ್ಲಿ ಪ್ರಮೂಕವಾದ ಸ್ಥಾನವನ್ನು ನಿಡಲು,ನಾಟಕಗಾರರು ಬಿನ್ನವಾದ ಪಾತ್ರಗಳನ್ನು ಪ್ರರಂಭಿಸುತ್ತಿದರು.
ಅವುಗಳಲ್ಲಿ ಹಾಸ್ಯ,ಗೀತೆ,ಭಯಕರವಾದ ಪಾತ್ರಗಳು ಮತ್ತು ಬಿನ್ನವಾದ ಪ್ರಾಣಿಗಳ ವೇಷಗಳನ್ನು ದರಿಸಿ ಮಕ್ಕಳ ಮನಸ್ಸನ್ನು ಮುಟುತ್ತಿದ್ದರು.ನಾಟಕವು ಬಹಳ ಅದ್ಭುತವಾಗಿ ಮೂಡಿಸಲು ನಾಟಕಗಾರರು ತರತರದ ಉಡುಪುಗಳನ್ನು ದರಿಸಿ,
ಪಾತ್ರದ ತಕ್ಕವಾಗಿ ಅಲಂಕಾರವನ್ನು ಮಾಡಿಕೋಳುತ್ತಿದರು.
ತುಂಬ ಪ್ರಮುಖವಾದ ಮಕ್ಕಳ ನಾಟಕಗಳು ಎಂದರೆ ಕುವೆಂಪುರವರ ನನ್ನ ಗೋಪಾಲ,ಮೋಡಣ್ಣನ ತಮ್ಮ.ಇನೂಂದು ಪ್ರಮುಖವಾದ ನಾಟಕ ಎಂದರೆ ರುದ್ರ ನಾಟಕ,
ಪಾಶ್ಚಾತ್ಯ ಸಾಹಿತ್ಯದಲ್ಲಿ ಟ್ರಾಜೆಡಿ ಎಂಬ ನಾಟಕ ಪ್ರಕಾರಕ್ಕೆ ಕನ್ನಡದಲ್ಲಿ ರುದ್ರನಾಟಕ ಎಂಬುದು ರೂಢಿಯ ಹೆಸರು;ಪರ್ಯಾಯವಾಗಿ ದುರಂತನಾಟಕ,ದುಃಖಾಂತ ನಾಟಕ,ವಿಷಾದಾಂತ ನಾಟಕ,
ಗಂಭೀರ ನಾಟಕ,ಆವಿದ್ಧ ನಾಟಕ-ಎಂದೂ ಹೇಳುವುದುಂಟು.ನಾಯಕನ ಅಥವಾ ನಾಯಕನನ್ನೂ ಒಳಗೊಂಡು ಕೆಲವರ ಸಾವುನೋವುಗಳಿಂದ ನಾಟಕ ಮುಗಿಯುವುದು ಇದರ ಸಾಮಾನ್ಯ ಲಕ್ಷಣ.
ಈಗ್ಗಿನ ಕಾಲದಲ್ಲಿ ನಾಟಕವನ್ನು ನೋಡುವರು ಕಡಿಮೆಯಾಗಿದ್ದಾರೆ.ಮಕ್ಕಳ ಗಮನ ನಾಟಕದಿಂದ ಸಿನಿಮಕ್ಕೆ ಸೆಳೆಯುತ್ತಿದೆ.ಈಗ ಸಿನಿಮದ ಮುಲಕ ನಾಟಕವನ್ನು ಮಕ್ಕಳಿಗೆ ಮುಟ್ಟಿಸುತ್ತಿದಾರೆ.ಸಿನಿಮದಲ್ಲಿ ಹಾಡುಗಳು,
ಕುಣಿತಗಳ ಮುಲಕ ಮಕ್ಕಳಿಗೆ ಬೇಕಾದ ವಿಚಾರಗಳನ್ನು ತಿಳಿಸುತ್ತಾರೆ.ಅದರೆ ಇಗಿನ ಸಿನಿಮಗಳು ಬದಲಾಗಿವೆ.
 
೧.<ref> ಶತಮಾನದ ಮಕ್ಕಳ ಸಾಹಿತ್ಯ - ಸಂ.ಎನ್.ಎಸ್.ರಘುನಾಥ್ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ೨೦೦೧</ref>.
೨.<ref> ಕನ್ನಡ ವಿಶ್ವಕೋಶ ಸಂಪುಟ ಮೂರು. ಕನ್ನಡ ಅಧ್ಯಯನ ಸಂಸ್ಥೆ , ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ೧೯೯೧.</ref>
೩.<ref> ಎನ್.ಶ್ರೀನಿವಾಸ ಉಡುಪ, ಕುಂಬಕಣ‍ನ ನಿದ್ದೆ. ನವಕರ್ನಾಟಕ ಪ್ರಕಾಶನ ಬೆಂಗಳೂರು - ೧೯೯೯.</ref>
"https://kn.wikipedia.org/wiki/ಮಕ್ಕಳ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ