'''ಹೊಳಹು''' ಎಂಬುದು ಪ್ರತಿಭಾ ಶಬ್ದದ ಅಕ್ಷರಾರ್ಥ. ಆದ್ದರಿಂದ ಪ್ರತಿಭೆಯೆಂದರೆ ಹೊಳೆದದ್ದು, ತಿಳಿದದ್ದಲ್ಲ. ಎಂದರೆ, ತರ್ಕಶಕ್ತಿಗೆ ಮೀರಿದ್ದು ಪ್ರತಿಭೆ. '''ಪ್ರಜ್ಞಾ ನವನವೋನ್ಮೇಷಶಾಲಿನೀನವನವೋಲ್ಲೇಖ ಶಾಲಿನೀ ಪ್ರತಿಭಾ ಮಾತಾ''' (ಹೊಸ ಹೊಸ ಭಾವಗಳನ್ನು ಕಾಣುವ ಪ್ರಜ್ಞೆ) ಎಂದು ಪ್ರತಿಭೆಯನ್ನು ಭಟ್ಟತೌತ ಲಕ್ಷಣೀಕರಿಸಿದ್ದಾನೆ. '''ನವನವೋನ್ಮೇಷಶಾಲಿನೀನವನವೋಲ್ಲೇಖ ಶಾಲಿನೀ''' ಎಂಬುದಕ್ಕೆ '''ನವನವೋಲ್ಲೇಖಶಾಲಿನೀನವನವೋನ್ಮೇಷ ಶಾಲಿನೀ''' ಎಂಬ ಪಾಠಾಂತರವುಂಟು. ಉನ್ಮೇಷ ಎಂದರೆ ಹೊಳಹು; ಉಲ್ಲೇಖ ಎಂದರೆ ವರ್ಣನೆ. ಪ್ರತಿಭೆ ಎರಡೂ ಹೌದು. ಅದು ಕಾಣುವ ಶಕ್ತಿಯೆಂತೊ ಅಂತೆ ಕಟ್ಟುವ ಶಕ್ತಿ, ದೃಷ್ಟಿಯೆಂತೊ ಅಂತೆ ಸೃಷ್ಟಿ. "ಯಾವುದು ಶಬ್ದ ಸಮೂಹವನ್ನು ಅರ್ಥಪುಂಜವನ್ನೂ [[ಅಲಂಕಾರ]]ತಂತ್ರವನ್ನೂ ಇದೇ ಬಗೆಯ ಇತರ ಉಕ್ತಿಮಾರ್ಗವನ್ನೂ ಹೃದಯದಲ್ಲಿ ಹೊಳೆಯಿಸುತ್ತದೋ ಅದೇ ಪ್ರತಿಭೆ" ಎಂಬ [[ರಾಜಶೇಖರ]]ನ ಮಾತುಗಳು ಗಮನಾರ್ಹವಾಗಿವೆ. ಹೀಗಾಗಿ ಪ್ರತಿಭೆ ಕಾವ್ಯದ ತಿರುಳಿಗೆ ಮಾತ್ರವಲ್ಲದೆ ತಂತ್ರಕ್ಕೂ ಸಂಬಂಧಿಸಿದ್ದು, ಇಡೀ ಕಾವ್ಯ ಅದರ ವ್ಯಾಪ್ತಿಯಲ್ಲೇ ಬರುತ್ತದೆ. "ಪ್ರತಿಭಾ ಅಪೂರ್ವ ವಸ್ತು ನಿರ್ಮಾಣಕ್ಷಮಾ" (ಅಪೂರ್ವ ವಸ್ತುಗಳನ್ನು ನಿರ್ಮಾಣಮಾಡುವ ಸಾಮಥ್ರ್ಯವುಳ್ಳದ್ದು) ಎಂಬುದು ಪ್ರತಿಭೆಯ ಬಗ್ಗೆ [[ಅಭಿನವಗುಪ್ತ]]ನ ಉಕ್ತಿ. ನವನವೋನ್ಮೇಷ ಮುಂತಾದ ಪ್ರತಿಭಾಸಂಬಂಧವಾದ ಈ ಮಾತುಗಳನ್ನು ಲಕ್ಷಿಸಿದರೆ, ಸ್ವೋಪಜ್ಞತೆ ಪ್ರತಿಭೆಯಸಾರ ಲಕ್ಷಣ ಎಂಬುದು ಸ್ಪಷ್ಟವಾಗುತ್ತದೆ.