ಕತ್ತಲ ಕಳೆವ ನವರಾತ್ರಿ

ದೇವತೆಗಳಿಂದ ವರಗಳ ಪಡೆದು ಸ್ತ್ರೀಶಕ್ತಿಯಿಂದ ಹೊರತಾಗಿ ಮರಣಬಾರದೆಂದು ಮದಿಸಿದ ಅಸುರರ ಸಂಹಾರಕ್ಕೆಂದೇ ಸಕಲ ದೇವತಾಂಶಗಳಿಂದ ಉದ್ಭವಿತಳಾಗಿ ಚತುಷಷ್ಠಿ ಕಳಾಮಯಿ ಮಹಾಮಾಯೆಯು ಅವತರಿಸಿ, ಶುಂಭ, ನಿಶುಂಭ, ರಕ್ತಭಿಜಾಸುರಾದಿ ಅಸುರರನ್ನು ಸಂಹರಿಸಿದ ಆ ಮಹತ್ತರವಾದ ಒಂಬತ್ತು ದಿವಸಗಳೇ ಮಹಾನವರಾತ್ರಿಯೆಂದು ಪ್ರಸಿದ್ಧಿ.

ವರ್ಷದ ಎಲ್ಲ ದಿನಗಳಲ್ಲೂ ಮಾಡಿದ ಪೂಜೆಗಳಿಗಿಂತ ಶತಾಧಿಕ ಫಲ ಈ ನವರಾತ್ರಿಯಂದು ದೇವ ದೇವಿಯರ ಪೂಜೆಯಿಂದ ಲಭಿಸುತ್ತದೆಂದು ಹೇಳಲಾಗಿದೆ. ಅದರಲ್ಲೂ 'ದೇವಿ ಭಾಗವತ' ದುರ್ಗಾ ಸಪ್ತಶತಿ (ಇದನ್ನು ಚಂಡಿಕಾ ಪಾರಾಯಣವೆಂತಲೂ ಕರೆಯುತ್ತಾರೆ). ಪುರಾಣೋಕ್ತವಾದ ಈ ಚರಿತ್ರೆಯು ತ್ರಿ ಕರಣ ಶುದ್ಧಿ ಪೂಜಾ ಪಾರಾಯಣಗಳಿಂದ, ಸಕಲ ಅನಿಷ್ಟ ನಿವಾರಣೆಯಾಗಿ ಶಾಂತಿ ಸಂಪತ್ತುಗಳು ಲಭಿಸುವುವು.

ಅಂದು ಗಂಡು ಹೆಣ್ಣಿನ ಮರದ ಗೊಂಬೆಗಳನ್ನು ಲಕ್ಷ್ಮೀ ನಾರಾಯಣರೆಂದೂ ಪೂಜಿಸಲಾಗುತ್ತದೆ. ಈ ಆಚರಣೆ ನಾದಿ ಕಾಲದಿಂದಲೂ ನಡೆದು ಬಂದಿದ್ದೂ, ದುರ್ಗಾಷ್ಟಮಿ ಮಾರ್ನವಮಿಯ ಆಯುಧ ಪೂಜಾದಿಗಳು ರಾಜಾಧಿ ರಾಜರೂ, ಆಚರಿಸಿಕೊಂಡು ಬಂದಿದ್ದೂ ವಿಜಯಶಾಲಿಗಳಾಗಿದ್ದಾರೆ. ಅಜ್ಞಾತವಾಸದಲ್ಲಿದ್ದ ಪಾಂಡವರು ತಮ್ಮ ಆಯುಧಗಳನ್ನು ಶಮೀ ವೃಕ್ಷದಲ್ಲಿ ಅವಿತಿಟ್ಟಿದ್ದೂ, ಆಯುಧ ಪೂಜೆಯನ್ನು ಮಾಡಿ ವಿಜಯಿಗಳಾದರೆಂಬುದು ಸರ್ವಾನುಭವ. ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯೂ, ಆದಿಶಕ್ತಿ ಎಂದೇ ಹಲವರ ನಂಬಿಕೆ. ಈ ಸ್ವಾಮಿಯ ಬ್ರಹ್ಮೋತ್ಸವವೂ ಈ ನವರಾತ್ರಿಯಲ್ಲಿಯೇ ಬ್ರಹ್ಮ ದೇವನಿಂದ ಆಚರಿಸಲ್ಪಟ್ಟು, ಇದೇ ದಿನಗಳಲ್ಲಿ ನಡೆಯುತ್ತಿರುವುದು ವಿಶೇಷ.

ಇನ್ನು ಹಲವಾರು ಶುಭ ಕಾರ್ಯಗಳಿಗೆ ಕೆಲ ಸಂವತ್ಸರಗಳಲ್ಲಿ ಸುಮೂಹರ್ತಗಳ ಕೊರತೆ ಉಂಟಾದ ಕಾರಣ, ನಮ್ಮ ಪೂರ್ವಿಕರು ಪಂಚಮಿ, ಅಕ್ಷಯ ತದಿಗೆ, ಬಲಿಪಾಡ್ಯಮಿಯನ್ನು ಶುಭ ತಿಥಿಗಳೆಂದು ಪರಿಗಣಿಸಿರುವಂತೆ, ವಿಜು ದಶಮಿಯೂ ಅತ್ಯಂತ ಶುಭ ತಿಥಿ. ಈ ದಿನಗಳಲ್ಲಿ ಕೂಡಿದ ಲಗ್ನಗಳು, ಜಾತಕದಲ್ಲಿನ ಹಲವು ದೋಷಗಳನ್ನೂ ನಿವಾರಿಸಬಲ್ಲವಾಗಿರುತ್ತದೆ ಎಂದು ಹೇಳಲಾಗಿದೆ.

ದಕ್ಷಿಣ ಭಾರತದ ಆಚರಣೆಗೆ ಒಳಪಟ್ಟಂತೆ ಮಂಗಳವಾರ ಹೊರತಾಗಿ ವಿಜಯ ದಶಮಿ ಎಲ್ಲ ಶುಭ ಕಾರ್ಯಗಳಿಗೂ ಯೋಗ್ಯ. ರಾಹು ಕಾಲ, ಯಮಗಂಡ ಕಾಲಗಳ ಹೊರತಾಗಿ ಶುಭ ಕಾರ್ಯಗಳನ್ನು ನಡೆಸಬಹುದು. ಆದರೆ ಉಪನಯನ ಕಾರ್ಯಕ್ಕೆ ಮಾತ್ರ ದಕ್ಷಿಣಾಯಣವಾದ್ದರಿಂದ ಇದು ತ್ಯಾಜ್ಯ. ಒಟ್ಟಾರೆ ನವರಾತ್ರಿ ಪೂಜೆಯಂತೂ ಅತ್ಯಂತ ಪುಣ್ಯದಾಯಕ, ಫಲದಾಯಕ.

ಹರಿ ಹರ ಬ್ರಹ್ಮಾದಿಗಳಿಂದ ಸುತ್ತುವರಿದ ಮಹಾ ತಾಯಿಯ ವರ್ಣನೆ ಅಸಾಧ್ಯ. ಅಪರಾಧ ಶತಂ ಕೃತ್ಪಾ ಜಗದಂಬೇತಿ ಜೊಜ್ವರೋತ್ ಎಂದು ಕ್ಷಮಾಪಣ ಸ್ತೋತ್ರ ಶಂಕರಾಚಾರ್ಯ ವಿರಚಿತ. ಆಕೆ ಸಕಲ ಅಪರಾಧಗಳನ್ನು ತಾಯಿಯಂತೇ ಕ್ಷಮಿಸಿ ಕಾಪಾಡುತ್ತಾಳೆ.