ಆದಿನಾಥ ಸ್ವಾಮಿ ಚಾಂ ಬಸದಿ, ಹಿರಿಯಂಗಡಿ

ಶ್ರೀ ಆದಿನಾಥ ಸ್ವಾಮಿ ಚಾಂ ಬಸದಿ, ಹಿರಿಯಂಗಡಿ

ಶೈಲಿ ಬದಲಾಯಿಸಿ

ಕಾರ್ಕಳದ ಹದಿನೆಂಟು ಬಸದಿಗಳ ಪೈಕಿ ಒಂಭತ್ತು ಬಸದಿಗಳನ್ನು ನಾವು ಹಿರಿಯಂಗಡಿಯಲ್ಲಿ ಕಾಣಬಹುದು. ಇದನ್ನು ಚಾಂ ಬಸದಿ ಎಂದು ಕರೆಯುತ್ತಾರೆ. ಹಿರಿಯಂಗಡಿಯಲ್ಲಿರುವಂತಹ ಈ ಬಸದಿಯ ಹತ್ತಿರದಲ್ಲಿ ಮೂರು ಬಸದಿಗಳಿದ್ದು ಒಂದು ಚಿಕ್ಕ ಬಸದಿಯೂ ಸಹ ಇದೆ. ಅದರಲ್ಲಿ ಪ್ರಮುಖರು ಕಾಂತಾವರ ಕುಟುಂಬದವರು.

ಮಾರ್ಗ ಬದಲಾಯಿಸಿ

ಕಾರ್ಕಳದಿಂದ ಸುಮಾರು ಎರಡು ಕಿಲೋಮೀಟರ್ ಅಂತರದಲ್ಲಿರುವ ಈ ಬಸದಿಯು ಕಾರ್ಕಳ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದ್ದು ಕುಂಟಡಿ ವಂಶಕ್ಕೆ ಸೇರಿದೆ.

ವಿನ್ಯಾಸ ಬದಲಾಯಿಸಿ

ಈ ಬಸದಿಯ ಒಳಗೆ ಶಿಲಾಮಯವಾಗಿದೆ. ನಮಗೆ ಈ ಬಸದಿಯನ್ನು ಯಾರು ಕಟ್ಟಿಸಿದರು, ಎಷ್ಟು ವರ್ಷಗಳ ಹಿಂದೆ ಕಟ್ಟಿಸಿದ್ದರೆಂಬುದು ಹಾಗೂ ಈ ಮನೆಯವರು ಈಗ ಎಲ್ಲಿದ್ದಾರೆ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ಈ ಬಸದಿಗೆ ಮೇಗಿನ ನೆಲೆ ಇಲ್ಲ. ಇಲ್ಲಿ ಶ್ರೀ ಆದಿನಾಥ ಸ್ವಾಮಿಯು ಮಾತ್ರವಲ್ಲದೆ ಮೂರನೇ ತೀರ್ಥಂಕರರಾದ ಶ್ರೀ ಶಂಭವನಾಥರಿಗೂ ಪೂಜೆ ನಡೆಯುತ್ತದೆ. ಇಲ್ಲಿ ನಾವು ಆದಿನಾಥ ಮೂರ್ತಿಯ ಸುತ್ತಲೂ ಶಿಲೆಯ ಪ್ರಭಾವಳಿಯಲ್ಲಿ ಇಪ್ಪತ್ನಾಲ್ಕು ತೀರ್ಥಂಕರರನ್ನು ಕಾಣಬಹುದು. ಬಸದಿಯ ಎದುರಿನಲ್ಲಿ ಮಾನಸ್ತಂಭವಿದೆ. ಇದು ಭಾರತದ ಅತ್ಯಂತ ದೊಡ್ಡ ಮಾನಸ್ತಂಭವಾಗಿದೆ. ಇಲ್ಲಿ ಪಾರಿಜಾತ ಹೂವಿನ ಗಿಡಗಳನ್ನು ಕಾಣಬಹುದು.

ಬಸದಿಯ ಎಡ-ಬಲ ಗೋಪುರಗಳಲ್ಲಿ ಯಕ್ಷ ಯಕ್ಷಿಯರ ಮೂರ್ತಿಗಳನ್ನು ಸ್ಥಾಪನೆ ಮಾಡಿದ್ದಾರೆ. ಈ ಬಸದಿಗೆಂದೇ ಪ್ರತ್ಯೇಕವಾದ ಕಾರ್ಯಾಲಯವಿದೆ. ಎಲ್ಲಾ ಬಸದಿಗಳಿಗೆ ಸೇರಿ ಒಂದು ಕಾರ್ಯಾಲಯವಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಇಲ್ಲಿದ್ದಂತಹ ಶ್ರೀ ವಿಶ್ವ ನಂದಿ ಮುನಿ ಮಹಾರಾಜರು ನಾಲ್ಕು ತಿಂಗಳುಗಳ ಕಾಲ ಚಾತುರ್ಮಾಸವನ್ನು ನಡೆಸಿದ್ದಾರೆ ಎಂಬುದಾಗಿ ಹೇಳುತ್ತಾರೆ. ಈ ಬಸದಿಗೆ ಹೊಂದಿಕೊಂಡಂತೆ ಯಾವುದೇ ಮುನಿ ವಾಸದ ಕೊಠಡಿಗಳಿಲ್ಲ. ಇಲ್ಲಿನ ಬಸದಿಯ ಕಂಬಗಳಲ್ಲಿ ಸಾಮಾನ್ಯ ಶಿಲ್ಪಗಳಿದ್ದು ಯಕ್ಷ ಯಕ್ಷಿಯರ ವಿಗ್ರಹ ಮುಂತಾದ ಕಲಾಕೃತಿಗಳಿವೆ. ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಯಾವುದೇ ದ್ವಾರಪಾಲಕರ ಚಿತ್ರಗಳಾಗಲಿ, ಅವರ ಕಲ್ಲಿನ ಮೂರ್ತಿಗಳಾಗಲಿ ಕಂಡುಬರುವುದಿಲ್ಲ. ಬದಲಾಗಿ ಗೋಡೆಗಳ ಮೇಲಿನ ಕಲ್ಲಿನ ಧರ್ಮಚಕ್ರದ ಉಬ್ಬು ಶಿಲ್ಪಗಳನ್ನು ಕಾಣಬಹುದು. ಅಲ್ಲದೆ ಪ್ರಾರ್ಥನಾ ಮಂಟಪಕ್ಕೆ ಪ್ರವೇಶಿಸುವ ಮೆಟ್ಟಿಲುಗಳ ಎಡ ಬಲ ಭಾಗಗಳಲ್ಲಿ ಆನೆಕಲ್ಲುಗಳಿವೆ. ಪ್ರಾರ್ಥನಾ ಮಂಟಪದಲ್ಲಿ ಅಧೋಮುಖ ಕಮಲದ ಕಲಾಕೃತಿಯನ್ನೊಳಗೊಂಡ ನಾಲ್ಕು ಕಂಬಗಳಿAದ ಕೂಡಿದ ಮಂಟಪವಿದೆ. ಅಲ್ಲಿ ಜಯ ಘಂಟೆ ಜಾಗಟೆಗಳನ್ನು ತೂಗುಹಾಕಲಾಗಿದೆ. ಅಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪ ಎಂದು ಕರೆಯುತ್ತಾರೆ. ತೀರ್ಥ ಮಂಟಪದಲ್ಲಿ ಗಂಧಕುಟಿ ಇಲ್ಲ. ಇದರ ಮುಂದೆ ಇರುವ ಮಂಟಪಕ್ಕೆ ಗೃಹಭಂಗ ಎನ್ನುತ್ತಾರೆ. ಇಲ್ಲಿ ಗೋಮುಖ ಯಕ್ಷ ಹಾಗೂ ಚಕ್ರೇಶ್ವರಿಯಕ್ಷಿ ಪೂಜೆಗೊಳ್ಳುತ್ತಾರೆ. ಇಲ್ಲಿನ ಜಿನಬಿಂಬಗಳ ಮೇಲೆ ಯಾವುದೇ ಬರವಣಿಗೆ ಕಂಡುಬರುವುದಿಲ್ಲ.[೧]

ವಾಸ್ತು ಶಿಲ್ಪ ಬದಲಾಯಿಸಿ

ಈ ಬಸದಿಯಲ್ಲಿರುವ ಶ್ರೀ ಆದಿನಾಥ ಸ್ವಾಮಿಯ ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದ್ದು, ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದೆ. ಈ ಬಿಂಬದ ಸುತ್ತಲೂ ಉಳಿದ ೨೩ ತೀರ್ಥಂಕರರ ಚಿಕ್ಕ ಪದ್ಮಾಸನ್ಥ ಬಿಂಬಗಳನ್ನು ಕಾಣಬಹುದು. ದಿನವೂ ಮೂಲ ಸ್ವಾಮಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಜಲಾಭಿಷೇಕ ಇತ್ಯಾದಿಗಳನ್ನು ಮಾಡಲಾಗುತ್ತದೆ. ಇಲ್ಲಿ ಸ್ವಾಮಿಯ ಬಿಂಬಕೆ ವಜ್ರಲೇಪನವನ್ನು ಮಾಡಲಾಗಿಲ್ಲ. ಆದರೆ ಅಷ್ಟು ಚೆನ್ನಾಗಿ ಹೊಳೆಯುತ್ತದೆ. ನಾಗರ ಪಂಚಮಿ ಶ್ರಾವಣ ಹುಣ್ಣಿಮೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ವಿಶೇಷ ಆರಾಧನೆ ನಡೆಯುತ್ತದೆ. ಈ ಬಸದಿಯಲ್ಲಿ ಪ್ರತ್ಯೇಕವಾಗಿ ಯಾವುದೇ ವಾರ್ಷಿಕೋತ್ಸವ, ರಥೋತ್ಸವ ನಡೆಯುವುದಿಲ್ಲ. ಬದಲಾಗಿ ವಿಶೇಷ ಪೂಜೆ, ಹಬ್ಬಗಳು, ನೋಂಪು ಮತ್ತು ಇತರ ಆಚರಣೆಗಳಾದ ದಶಲಕ್ಷಣ ಪರ್ವ, ಜೀವದಯಾಷ್ಟಮಿ ಮುಂತಾದವುಗಳನ್ನು ಇಲ್ಲಿಯ ಎಲ್ಲ ಬಸದಿಗಳಲ್ಲಿ ಒಟ್ಟಾಗಿ ಮಾಡುತ್ತಾರೆ.

ಈ ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಇಲ್ಲಿ ನಾಗರಕಲ್ಲನ್ನು ಪ್ರತಿಷ್ಠಾಪಿಸಲಾಗಿದೆ. ಪರಿಸರದ ಜನರಿಗೆ ಕ್ಷೇತ್ರಪಾಲನ ಮೇಲೆ ವಿಶೇಷ ನಂಬಿಕೆಯಿದ್ದು, ಮಹಿಮೆಯಿಂದ ಇಲ್ಲಿ ಯಾವುದೇ ಅವಘಡಗಳು ಆಗುವುದಿಲ್ಲವೆಂಬ ನಂಬಿಕೆ ಜನರಲ್ಲಿದೆ. ಕೆಲವು ತಿಂಗಳುಗಳ ಹಿಂದೆ  ಬಸದಿಯ ಪಕ್ಕದಲ್ಲಿರುವ ಬಾವಿಯ ಮಣ್ಣನ್ನು ತೆಗೆಯುವ ಸಂದರ್ಭದಲ್ಲಿ ಅನೇಕ ಹಳೆಯ ಕಂಚಿನ ಪ್ರತಿಮೆಗಳು ದೊರಕಿದ್ದು, ಇದನ್ನು ನಾವು ಈ ಬಸದಿಯಲ್ಲಿ ವ್ಯವಸ್ಥಿತವಾಗಿ ಇಟ್ಟಿರುವುದನ್ನು ಕಾಣಬಹುದು. ಅಲ್ಲದೆ ಬಲಿಕಲ್ಲುಗಳು, ಅಷ್ಟದಿಕ್ಪಾಲಕರ ಕಲ್ಲುಗಳು ಇವೆ.  ಬಸದಿಯ ಸುತ್ತಲೂ ಮುರುಕಲ್ಲಿನಿಂದ ನಿರ್ಮಿಸಿದ ಪ್ರಕಾರ ಗೋಡೆಯನ್ನು ಕಾಣಬಹುದು. ಈ ಬಸದಿಗೆ ಪ್ರತ್ಯೇಕವಾದ ಕಚೇರಿ ಇಲ್ಲ.
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. pp. ೪೦.