ಶೋರ್ ಟೆಂಪಲ್ (ಸು. ಕ್ರಿ.ಶ. 725) ಬಂಗಾಳ ಕೊಲ್ಲಿಯ ತೀರದಲ್ಲಿರುವ ದೇವಾಲಯಗಳು ಮತ್ತು ದೇಗುಲಗಳ ಸಂಕೀರ್ಣವಾಗಿದೆ. ಇದು ಭಾರತದ ತಮಿಳುನಾಡು ರಾಜ್ಯದ ಮಹಾಬಲಿಪುರಮ್‍ನಲ್ಲಿದೆ.[೧][೨]

ಶೋರ್ ಟೆಂಪಲ್ ಸಂಕೀರ್ಣ

ಇದು ಒಂದು ರಚನಾತ್ಮಕ ದೇವಾಲಯವಾಗಿದ್ದು, ಗ್ರಾನೈಟ್ ತುಂಡುಗಳಿಂದ ನಿರ್ಮಿಸಲ್ಪಟ್ಟಿದೆ. ಇದು ಕ್ರಿ.ಶ. 8 ನೇ ಶತಮಾನದ್ದೆಂದು ಕಾಲನಿರ್ಧಾರ ಮಾಡಲಾಗಿದೆ. ಇದರ ರಚನೆಯ ಸಮಯದಲ್ಲಿ, ಅಂದರೆ ಪಲ್ಲವ ರಾಜವಂಶದ ನರಸಿಂಹವರ್ಮನ್ II ರ ಆಳ್ವಿಕೆಯ ಕಾಲದಲ್ಲಿ ಈ ತಾಣವು ಬಿಡುವಿಲ್ಲದ ಬಂದರು ಆಗಿತ್ತು.[೩] ಮಹಾಬಲಿಪುರಂನಲ್ಲಿರುವ ಸ್ಮಾರಕಗಳ ಗುಂಪಿನಲ್ಲಿ ಒಂದಾಗಿ ಇದನ್ನು 1984 ರಿಂದ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ವರ್ಗೀಕರಿಸಲಾಗಿದೆ.[೪] ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ರಚನಾತ್ಮಕ ಕಲ್ಲಿನ ದೇವಾಲಯಗಳ ಪೈಕಿ ಒಂದಾಗಿದೆ.[೩]

ಇತಿಹಾಸ ಬದಲಾಯಿಸಿ

ಮಾರ್ಕೊ ಪೊಲೊ ಮತ್ತು ಏಷ್ಯಾಕ್ಕೆ ಅವನ ನಂತರ ಬಂದ ಯುರೋಪಿಯನ್ ವ್ಯಾಪಾರಿಗಳು ಈ ತಾಣವನ್ನು ಸೆವೆನ್ ಪಗೋಡಾಸ್ (ಏಳು ಪಗೋಡಾಗಳು) ಎಂದು ಕರೆದರು. ಇವುಗಳಲ್ಲಿ ಒಂದು ಶೋರ್ ಟೆಂಪಲ್ ಎಂದು ನಂಬಲಾಗಿದೆ. ಈ ದೇವಾಲಯವು ಬಹುಶಃ ಸಮುದ್ರಯಾನಕಾರರಿಗೆ ಒಂದು ಹೆಗ್ಗುರುತಾಗಿ ಕಾರ್ಯನಿರ್ವಹಿಸುತ್ತಿತ್ತು. ಇದು ಪಗೋಡಾದಂತೆ ಗೋಚರಿಸುವುದರಿಂದ, ಈ ಹೆಸರು ಸಮುದ್ರಯಾನಕಾರರಿಗೆ ಪರಿಚಿತವಾಯಿತು.[೫]

ಈ ರಚನಾತ್ಮಕ ದೇವಾಲಯ ಸಂಕೀರ್ಣವು 7 ನೇ ಶತಮಾನದ ಮಧ್ಯಭಾಗದಲ್ಲಿ ರಾಜ ನರಸಿಂಹವರ್ಮನ್ II ಪ್ರಾರಂಭಿಸಿದ ವಾಸ್ತುಕಲಾ ರಚನೆಗಳ (ಗುಹಾ ದೇವಾಲಯಗಳು ಮತ್ತು ಏಕಶಿಲಾ ರಥಗಳೊಂದಿಗೆ ಆರಂಭಗೊಂಡು) ಪರಾಕಾಷ್ಠೆಯಾಗಿತ್ತು.[೨] ಅತಿರಣಚಂಡ ಗುಹೆ, ಪಿಡಾರಿ ರಥಗಳು ಮತ್ತು ಟೈಗರ್ ಕೇವ್‍ಗಳಲ್ಲಿ ಕಂಡುಬಂದಂಥ ಕೆತ್ತಲ್ಪಟ್ಟ ರಚನೆಗಳನ್ನು ರೂಪಿಸುವ ವಾಸ್ತುಕಲಾ ಸೃಷ್ಟಿಯು ನಂತರದ ಅವಧಿಗಳಲ್ಲಿ ಮುಂದುವರಿದರೂ ಸಹ, ರಚನಾತ್ಮಕ ದೇವಾಲಯಗಳ ವರ್ಗದಲ್ಲಿನ ಶೋರ್ ಟೆಂಪಲ್ ಸಂಕೀರ್ಣದ ವಾಸ್ತುಕಲಾ ಸೊಬಗಿನ ಮುಖ್ಯ ಶ್ರೇಯ ಪಲ್ಲವ ರಾಜವಂಶದ ನರಸಿಂಹವರ್ಮನ್ II ನಿಗೆ ಸಲ್ಲುತ್ತದೆ. ಪಲ್ಲವರನ್ನು ಸೋಲಿಸಿದ ನಂತರ ತಮಿಳುನಾಡನ್ನು ಆಳಿದ ಚೋಳರು (ಅವರು ನಿರ್ಮಿಸಿದ ದೇವಾಲಯಗಳಲ್ಲಿ) ಶೋರ್ ಟೆಂಪಲ್‍ನ ವಾಸ್ತುಕಲೆಯನ್ನು ಮುಂದುವರೆಸಿದರು.[೬]

ಕೋರಮಂಡಲ್ ಕರಾವಳಿಯನ್ನು ಅಪ್ಪಳಿಸಿದ ಡಿಸೆಂಬರ್ 2004 ರ ಸುನಾಮಿಯು ಸಂಪೂರ್ಣವಾಗಿ ಗ್ರಾನೈಟ್ ತುಂಡುಗಳಿಂದ ನಿರ್ಮಿಸಲ್ಪಟ್ಟ ಒಂದು ಹಳೆಯ ಕುಸಿದ ದೇವಾಲಯವನ್ನು ಬಹಿರಂಗಪಡಿಸಿತು. ಮಹಾಬಲಿಪುರಮ್ ದೇವಾಲಯವು ಯುರೋಪಿಯನ್ನರ ಡೈರಿಗಳಲ್ಲಿ ವರ್ಣಿಸಲ್ಪಟ್ಟ ಏಳು ಪಗೋಡಗಳ ಒಂದು ಭಾಗವಾಗಿದೆ ಎಂಬ ಊಹೆಯನ್ನು ಇದು ನವೀಕರಿಸಿದೆ. ಅವುಗಳಲ್ಲಿ ಆರು ದೇವಾಲಯಗಳು ಸಮುದ್ರದಲ್ಲಿ ಮುಳುಗಿವೆ. 7 ಮತ್ತು 8 ನೇ ಶತಮಾನಗಳಲ್ಲಿ ಪಲ್ಲವರ ಕಾಲದಲ್ಲಿ ಗೋಡೆಗಳು ಮತ್ತು ದೇವಾಲಯಗಳನ್ನು ಅಲಂಕರಿಸಲು ಬಳಸಲಾಗುತ್ತಿದ್ದ ಸಿಂಹಗಳು, ಆನೆಗಳು ಮತ್ತು ನವಿಲುಗಳ ಕೆಲವು ಪ್ರಾಚೀನ ಶಿಲಾ ಶಿಲ್ಪಗಳನ್ನೂ ಸುನಾಮಿ ಬಹಿರಂಗಪಡಿಸಿತು.[೭]

೨೦೦೪ರ ಸುನಾಮಿಯು ದೇವಸ್ಥಾನ ಮತ್ತು ಸುತ್ತಲಿನ ಉದ್ಯಾನವನ್ನು ಅಪ್ಪಳಿಸಿದರೂ, ಶೋರ್ ಟೆಂಪಲ್ ಕೆಟ್ಟದಾಗಿ ಹಾನಿಗೊಳಗಾಗಲಿಲ್ಲ, ಏಕೆಂದರೆ ನೀರಿನ ಮಟ್ಟವು ಕೆಲವೇ ನಿಮಿಷಗಳಲ್ಲಿ ಸಾಮಾನ್ಯ ಮಟ್ಟಕ್ಕೆ ಮರಳಿತು. ದೇವಾಲಯದ ಮುಂಭಾಗದಲ್ಲಿರುವ ಬಲಿ ಪೀಠದ ಅಡಿಪಾಯ, ದೋಣಿಯ ಬಂದರು ಕಾಪಿಗೆ ಕರೆದೊಯ್ಯುವ ಮೆಟ್ಟಿಲುಗಳು ಮತ್ತು ಶೋರ್ ಟೆಂಪಲ್‍ನ ನೆಲಮಾಳಿಗೆಯಲ್ಲಿನ ವರಾಹ (ಹಂದಿ) ಶಿಲ್ಪವಿರುವ ಸಣ್ಣ ದೇಗುಲಕ್ಕೆ ಹಾನಿಯಾಯಿತು. ದೇವಾಲಯದ ಅಡಿಪಾಯವು ಗಟ್ಟಿಯಾದ ಗ್ರಾನೈಟ್ ಬಂಡೆಯ ಮೇಲೆ ಇರುವುದರಿಂದ, ಇದು ಸುನಾಮಿಯಿಂದ ಉಂಟಾಗುವ ಅಲೆಗಳನ್ನು ತಡೆದುಕೊಂಡಿತು; ಕರಾವಳಿಯಲ್ಲಿ ದೇವಾಲಯ ಪ್ರದೇಶದ ಸುತ್ತಲೂ ನಿರ್ಮಿಸಲಾದ ತೀರಗೋಡೆಗಳೂ ಅದರ ರಕ್ಷಣೆಗೆ ನೆರವಾದವು.[೮]

ಚಿಕ್ಕದಾದ ಶಿವ ದೇವಾಲಯದ ಚಪ್ಪಡಿಯಲ್ಲಿ ಕಂಡುಬಂದಿರುವ ಎರಡು ಶಾಸನಗಳ ಪ್ರಕಾರ, ಉಲ್ಲೇಖಿಸಲಾದ ಮೂರು ದೇವಾಲಯಗಳ ಹೆಸರುಗಳು ಕ್ಷತ್ರಿಯಸಿಂಹ ಪಲ್ಲವೇಶ್ವರ-ಗೃಹಂ, ರಾಜಸಿಂಹ ಪಲ್ಲವೇಶ್ವರ-ಗೃಹಂ ಮತ್ತು ಪ್ಲಿಕೊಂಡರುಳಿಯ-ದೇವರು ಎಂದಾಗಿವೆ. ಇಡೀ ದೇವಾಲಯ ಸಂಕೀರ್ಣವನ್ನು ಜಲಶಯನ (ನೀರಿನಲ್ಲಿ ಮಲಗಿರುವುದು) ಎಂದು ಕರೆಯಲಾಗುತ್ತದೆ. ವಿಷ್ಣು ದೇಗುಲವೇ ಇಲ್ಲಿ ಉತ್ಖನನಗೊಂಡ ಮೊದಲ ದೇಗುಲ ಎಂಬುದು ಇದರಿಂದ ದೃಢಪಡುತ್ತದೆ. ವಿಷ್ಣು ದೇಗುಲದ ಹಾಸುಗಲ್ಲಿನ ಮೇಲಿನ ಶಾಸನವೂ ಇದನ್ನು ನರಪತಿಸಿಂಹ ಪಲ್ಲವ ವಿಷ್ಣು ಗೃಹ ಎಂದು ಉಲ್ಲೇಖಿಸುತ್ತದೆ, ಇಲ್ಲಿ ನರಪತಿಸಿಂಹ ಎಂಬುದು ರಾಜಸಿಂಹನ ಒಂದು ಬಿರುದು.[೫]

ವಾಸ್ತುಕಲೆ ಬದಲಾಯಿಸಿ

 
ಶೋರ್ ಟೆಂಪಲ್‍ನ ನೆಲನಕಾಸೆ.

ಶೋರ್ ಟೆಂಪಲ್ ಸಂಕೀರ್ಣದ ಎಲ್ಲ ಮೂರು ದೇವಾಲಯಗಳನ್ನು ಒಂದೇ ವೇದಿಕೆಯಲ್ಲಿ ನಿರ್ಮಿಸಲಾಗಿದೆ. ಉತ್ತರದ ತುದಿಯಿಂದ ನೋಡಿದಾಗ, ದೇವಾಲಯಗಳು ಧರ್ಮರಾಜ ರಥದ ಪ್ರತಿರೂಪವಾಗಿ ಕಂಡುಬರುತ್ತವೆ.[೫] ದೇಗುಲದಲ್ಲಿರುವ ಶಿವಲಿಂಗದ ಮುಖ್ಯ ದೇವತೆಯ ಮೇಲೆ ಸೂರ್ಯನ ಕಿರಣಗಳು ಹೊಳೆಯುವಂತೆ ಪೂರ್ವಕ್ಕೆ ಮುಖಮಾಡಿರುವ ಮುಖ್ಯ ಶೋರ್ ಟೆಂಪಲ್ ಐದು ಅಂತಸ್ತಿನ ರಚನಾತ್ಮಕ ಹಿಂದೂ ದೇವಾಲಯವಾಗಿದೆ. ಈ ತಾಣದಲ್ಲಿರುವ ಇತರ ಸ್ಮಾರಕಗಳು ಕಲ್ಲಿನಲ್ಲಿ ಕೆತ್ತಲ್ಪಟ್ಟಿವೆ. ಹತ್ತಿರದ ಒಂದು ಕಲ್ಲುಗಣಿಯಿಂದ ಸಾಗಿಸಲ್ಪಟ್ಟ ಗ್ರಾನೈಟ್ ಕಲ್ಲುಗಳಿಂದ ಇದನ್ನು ನಿರ್ಮಿಸಲಾಗಿದೆ. ಇದು ದಕ್ಷಿಣ ಭಾರತದಲ್ಲಿನ ಅತ್ಯಂತ ಮುಂಚಿನ ಪ್ರಮುಖ ರಚನಾತ್ಮಕ ದೇವಾಲಯವಾಗಿದೆ. ಇದರ ಪಿರಮಿಡ್ ರಚನೆಯು 60 feet (18 m) ಎತ್ತರವಿದ್ದು 50 feet (15 m) ಚದರ ವೇದಿಕೆ ಮೇಲೆ ನಿಂತಿದೆ. ಮುಂಭಾಗದಲ್ಲಿ ಒಂದು ಸಣ್ಣ ದೇವಾಲಯವಿದ್ದು ಇದು ಮೂಲ ಮುಖಮಂಟಪವಾಗಿತ್ತು . ಇದನ್ನು ನಯವಾಗಿ ಕತ್ತರಿಸಿದ ಸ್ಥಳೀಯ ಗ್ರಾನೈಟ್‌ನಿಂದ ತಯಾರಿಸಲಾಗಿದೆ.[೯]

ಶೋರ್ ಟೆಂಪಲ್ ಮಹಾಬಲಿಪುರಮ್‍ನ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. 2000 ರ ದಶಕದ ಆರಂಭದಲ್ಲಿ ನಡೆದ ಉತ್ಖನನಗಳು ಇಲ್ಲಿ ಮರಳಿನ ಕೆಳಗೆ ಹೊಸ ರಚನೆಗಳನ್ನು ಬಹಿರಂಗಪಡಿಸಿವೆ.[೧೦]

ದೇವಾಲಯವು ಮೂರು ಗುಡಿಗಳ ಸಂಯೋಜನೆಯಾಗಿದೆ. ಮುಖ್ಯ ಗುಡಿಯು ಶಿವನಿಗೆ ಸಮರ್ಪಿತವಾಗಿದೆ, ಹಾಗೆಯೇ ಚಿಕ್ಕದಾದ ಎರಡನೇಯದೂ ಕೂಡ. ಇವೆರಡರ ನಡುವೆ ಇರುವ ಒಂದು ಸಣ್ಣ ಮೂರನೇ ಗುಡಿಯು ಮಲಗಿರುವ ವಿಷ್ಣುವಿಗೆ ಸಮರ್ಪಿತವಾಗಿದೆ. ದೇವಸ್ಥಾನದೊಳಗೆ ವಿಷ್ಣು ಗುಡಿಯನ್ನು ಪ್ರವೇಶಿಸಿ ನೀರು ಹರಿದು ಬರುತ್ತಿದ್ದಿರಬೇಕು. ಎರಡು ಶಿವಾಲಯಗಳು ಸಂರಚನೆಯಲ್ಲಿ ಲಂಬಕೋನೀಯವಾಗಿವೆ. ಪ್ರವೇಶದ್ವಾರವು ಅಡ್ಡ ಉರುಳೆ ಮಾಳಿಗೆಯ ಗೋಪುರದ ಮೂಲಕ ಇದೆ. ಎರಡು ಶಿಖರಗಳು ಪಿರಮಿಡ್ ರೂಪರೇಖೆಯನ್ನು ಹೊಂದಿವೆ. ಪ್ರತಿಯೊಂದು ಅಂತಸ್ತು ಗಾಢ ನೆರಳುಗಳನ್ನು ಬಿತ್ತರಿಸುವ ಮೇಲ್ಭಾಗದ ಮುಂಜೂರುಗಳೊಂದಿಗೆ ವಿಭಿನ್ನವಾಗಿದೆ.[೩] ವಿಷ್ಣುವಿನ ಗುಡಿಯ ಹೊರಗೋಡೆ ಹಾಗೂ ಗಡಿಗೋಡೆಯ ಒಳಭಾಗವು ವ್ಯಾಪಕವಾಗಿ ಕೆತ್ತಲ್ಪಟ್ಟಿವೆ ಮತ್ತು ನಂದಿಯ ದೊಡ್ಡ ಶಿಲ್ಪಗಳು ಮೇಲಿವೆ. ದೇವಾಲಯದ ಹೊರ ಗೋಡೆಗಳನ್ನು ಚೌಕಸ್ತಂಭಗಳು ವಿಭಾಗಳಾಗಿ ವಿಭಜಿಸಿವೆ. ಕೆಳಗಿನ ಭಾಗವನ್ನು ನೆಟ್ಟಗೆ ನಿಂತ ಸಿಂಹಗಳ ಸರಣಿಯಾಗಿ ಕೆತ್ತಲಾಗಿದೆ. ದೇವಾಲಯದ ಗೋಡೆಗಳು ನಂದಿಯ ಶಿಲ್ಪಗಳಿಂದ ಸುತ್ತುವರಿಯಲ್ಪಟ್ಟಿವೆ.[೧೧]

ಕಲಾಕೃತಿ ಮತ್ತು ಮೂರ್ತಿಶಿಲ್ಪ ಬದಲಾಯಿಸಿ

 
ಚಿಕಣಿ ದೇಗುಲ

ದೇವಾಲಯವು ಗರ್ಭಗೃಹವನ್ನು ಹೊಂದಿದ್ದು, ಅದರಲ್ಲಿ ದೇವತೆಯಾದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ ಮತ್ತು ಪ್ರದಕ್ಷಿಣೆಗೆ ನಡುವೆ ಸ್ವಲ್ಪ ಜಾಗವನ್ನು ಬಿಟ್ಟು ಭಾರವಾದ ಹೊರ ಗೋಡೆಯಿಂದ ಸುತ್ತುವರಿಯಲ್ಪಟ್ಟ ಸಣ್ಣ ಮಂಟಪವಿದೆ . ಹಿಂಭಾಗದಲ್ಲಿ ಎರಡು ಗುಡಿಗಳು ವಿರುದ್ಧ ದಿಕ್ಕಿನಲ್ಲಿವೆ. ಕ್ಷತ್ರಿಯಸಿಮ್ನೇಶ್ವರನಿಗೆ ಸಮರ್ಪಿತವಾದ ಒಳಗಿನ ಗುಡಿಯನ್ನು ಒಂದು ಮಾರ್ಗದ ಮೂಲಕ ತಲುಪಬಹುದು. ಇನ್ನೊಂದು ವಿಷ್ಣುವಿಗೆ ಸಮರ್ಪಿತವಾಗಿದೆ ಮತ್ತು ಹೊರಕ್ಕೆ ಮುಖಮಾಡಿದೆ. ದುರ್ಗೆಯು ತನ್ನ ವಾಹನ ಸಿಂಹದ ಮೇಲೆ ಕುಳಿತಿದ್ದಾಳೆ. ಸಿಂಹದ ಎದೆಯ ಕುಳಿಯಲ್ಲಿ ಒಂದು ಚಿಕ್ಕ ಗುಡಿ ಇದ್ದಿರಬಹುದು. ಶೋರ್ ಟೆಂಪಲ್‍ಗಳು, ಅನೇಕ ಪ್ರಮುಖ ಹಿಂದೂ ದೇವಾಲಯಗಳಂತೆ, ಶೈವ ಮತ್ತು ವೈಷ್ಣವ ಪಂಥದ ದೇವಾಲಯಗಳು ಮತ್ತು ಮೂರ್ತಿಶಿಲ್ಪವನ್ನು ಒಳಗೊಂಡಿವೆ.[೩]

ದೇವಾಲಯಗಳ ಮೇಲ್ಛಾವಣಿಗಳು ಪಂಚ ರಥಗಳನ್ನು ಹೋಲುವ ಅಲಂಕರಣವನ್ನು ಹೊಂದಿವೆ. ಚಾವಣಿಗಳು ಮೇಲ್ಭಾಗದಲ್ಲಿ ಶಿಖರಾಲಂಕಾರಗಳನ್ನು ಹೊಂದಿವೆ. ಅದು ಪೂರ್ಣಗೊಂಡ ದೇವಾಲಯವಾಗಿದ್ದರಿಂದ ಅದರ ಧಾರ್ಮಿಕ ಕ್ರಿಯಾತ್ಮಕ ಸ್ವರೂಪವನ್ನು ಸೂಚಿಸುತ್ತದೆ. ಶಿವನಿಗೆ ಸಮರ್ಪಿತವಾದ ಎರಡು ದೇವಾಲಯಗಳ ಶಿಖರಗಳ ಅಷ್ಟಭುಜಾಕೃತಿ ಆಕಾರವು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿದೆ.[೫] ಗೋಪುರಗಳ ಕೆಳಗೆ, ದೇವಾಲಯದ ಗೋಡೆಗಳು ಯಾವುದೇ ಅಲಂಕಾರಗಳಿಲ್ಲದೆ ಬಹುತೇಕ ಖಾಲಿಯಾಗಿರುತ್ತವೆ ಆದರೆ ಸ್ತಂಭಗಳನ್ನು ಸಿಂಹದ ಶಿಲ್ಪಗಳಿರುವ ಆಧಾರಗಳ ಮೇಲೆ ಕೆತ್ತಲಾಗಿದೆ.[೧೨] ಈ ಗುಡಿಗಳ ಹೊರ ಮುಖಗಳ ಮೇಲಿನ ಅಲಂಕಾರಗಳು ಪಂಚ ರಥಗಳಲ್ಲಿ ಕಂಡುಬರುವಂತೆಯೇ ಇವೆ, ಆದರೂ ಸಮುದ್ರಕ್ಕೆ ಹತ್ತಿರವಾಗಿರುವುದರಿಂದ ಉಪ್ಪು ಗಾಳಿಯಿಂದಾಗಿ ಭಾಗಶಃ ಸವೆದುಹೋಗಿವೆ.

 
ಶಿವ, ಉಮಾ ಮತ್ತು ಅವರ ಮಗ ಸ್ಕಂದ ಇರುವ ಸೋಮಸ್ಕಂದ ಫಲಕ

ದೇವಾಲಯದ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಧಾರಾಲಿಂಗ ಮತ್ತು ಸೋಮಸ್ಕಂದ ಫಲಕ. ಇವುಗಳನ್ನು ಪೂರ್ವಾಭಿಮುಖವಾಗಿರುವ ಕ್ಷತ್ರಿಯಸಿಂಹೇಶ್ವರ ದೇವಾಲಯದ ಗರ್ಭಗುಡಿಯ ಒಳಗೋಡೆಗಳಲ್ಲಿ ದೈವೀಕರಿಸಲಾಗಿದೆ. ಧಾರಾಲಿಂಗವನ್ನು ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿದೆ, ಇದು 12 feet (3.7 m) ) ಚದರ ಆಕಾರದಲ್ಲಿದೆ ಮತ್ತು ಇದರ ಎತ್ತರ 11 feet (3.4 m) ಆಗಿದೆ. ಧಾರಾಲಿಂಗ ಅಥವಾ ಶಿವಲಿಂಗವು ರಾಜಸಿಂಹ ಶೈಲಿಯಲ್ಲಿದ್ದು, ಕಪ್ಪು ಬಸಾಲ್ಟ್ ಕಲ್ಲಿನಿಂದ ಕೆತ್ತಲ್ಪಟ್ಟಿದೆ. ಇದು ಮೇಲ್ಭಾಗದಲ್ಲಿ ಕಿರೀಟವನ್ನು ಸೃಷ್ಟಿಸಲು ಸಣ್ಣ ಕೊಳವೆ ಕೊರೆದಿದ್ದು ಹದಿನಾರು ಮುಖಗಳನ್ನು ಹೊಂದಿದೆ. ಲಿಂಗದ ಮೇಲಿನ ಭಾಗಕ್ಕೆ ಹಾನಿಯಾಗಿದೆ. ಇದರ ಒಟ್ಟು ಎತ್ತರ 6 feet (1.8 m). ಸ್ಥಿರತೆಯನ್ನು ಒದಗಿಸಲು ಅಡಿಪಾಯದಲ್ಲಿ ಒಂದು ಪಾದವನ್ನು ನೆಡಲಾಗಿದೆ.[೫] ಕಲ್ಲಿನ ಚಪ್ಪಡಿಯ ಮೇಲೆ ನಿರ್ಮಿಸಲಾದ ಶಿವ ಮತ್ತು ಅವನ ಪತ್ನಿ ಪಾರ್ವತಿ ಅವರ ಮಗು ಕಾರ್ತಿಕೇಯನ ಕುಟುಂಬದ ವಿಗ್ರಹವಾಗಿರುವ ಒಂದು ಅರೆ-ಉಬ್ಬುಶಿಲ್ಪವು ದೇವಾಲಯದ ಒಂದು ಸಣ್ಣ ಗುಡಿಯಲ್ಲಿದೆ. ಇದನ್ನು ಸೋಮಸ್ಕಂದ ಫಲಕ, ಕೆತ್ತಿದ ಕಲ್ಲಿನ ಫಲಕ ಎಂದೂ ಕರೆಯುತ್ತಾರೆ. ದೇವಾಲಯದ ಪ್ರವೇಶ ದ್ವಾರದ ಮುಖಮಂಟಪದಲ್ಲಿ ಇದೇ ರೀತಿಯ ಇನ್ನೂ ಎರಡು ಫಲಕಗಳನ್ನು ಕಾಣಬಹುದು. ಪರಮೇಶ್ವರವರ್ಮನ ಯುಗದ ಹತ್ತಿರದ ಧರ್ಮರಾಜ ರಥದಲ್ಲಿಯೂ ಈ ರೀತಿಯ ಫಲಕವನ್ನು ಚಿತ್ರಿಸಲಾಗಿದೆ.[೫][೧೩][೧೪] ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ಮೊದಲ ಕೋಣೆಯಾಗಿರುವ ಅರ್ಧಮಂಟಪವು ದಕ್ಷಿಣ ಗೋಡೆಯ ಮೇಲೆ ಬ್ರಹ್ಮ ಮತ್ತು ಅದರ ಉತ್ತರ ಗೋಡೆಯಲ್ಲಿ ವಿಷ್ಣುವಿನ ಶಿಲ್ಪಗಳನ್ನೂ ಹೊಂದಿದೆ. ಮುಖ್ಯ ಗುಡಿಯ ಉತ್ತರ ಗೋಡೆಯ ಹಿಂಭಾಗದಲ್ಲಿ ತ್ರಿಪುರಾಂತಕನಾಗಿ ಶಿವ ಮತ್ತು ದುರ್ಗೆಯ ಶಿಲ್ಪಗಳು ಕಂಡುಬರುತ್ತವೆ. ಪ್ರದಕ್ಷಿಣಾಕಾರವಾಗಿ ಮುಖ್ಯ ಗುಡಿಯನ್ನು ಸುತ್ತಲು ಪ್ರದಕ್ಷಿಣಾ ಮಾರ್ಗವೂ ಇದೆ.[೫]

 
ಒಂದು ಉಬ್ಬುಶಿಲ್ಪ.

ಮುಖ್ಯ ದೇವಾಲಯದ ಹಿಂದಿರುವ ಚಿಕ್ಕದಾದ ಶಿವ ದೇವಾಲಯವು ಎರಡು ಅಂತಸ್ತಿನ ರಚನೆಯಾಗಿದ್ದು, ಮೆಟ್ಟಿಲುಗಳಿರುವ ಪಿರಮಿಡ್ ಗೋಪುರವನ್ನು ಹೊಂದಿದ್ದು ಅಷ್ಟಭುಜಾಕೃತಿಯ ಶಿಖರವನ್ನು ವೃತ್ತಾಕಾರದ ಗ್ರೀವದ ಮೇಲೆ ನಿರ್ಮಿಸಲಾಗಿದೆ. ಶಿಖರದ ಮೇಲೆ ಕಲಶ ಮತ್ತು ಅಲಂಕಾರವನ್ನು ಅಳವಡಿಸಲಾಗಿದೆ. ಕುಡುಸ್ (ಕುದುರೆಲಾಳ-ಕಮಾನು ಚಾಚು ಕಿಟಕಿಯಂತಹ ಮುಂಚಾಚುಗಳು) ಮತ್ತು ಸಣ್ಣ ಗುಡಿಗಳು ರಚನೆಯ ಎರಡೂ ಮಟ್ಟಗಳಲ್ಲಿ ಕಾರಣೆಗಳ ಭಾಗವಾಗಿವೆ. ಸೋಮಸ್ಕಂದ ಫಲಕವು ಒಳಗಿನ ಗುಡಿಯ ಹಿಂಭಾಗದ ಗೋಡೆಯನ್ನು ಅಲಂಕರಿಸುತ್ತದೆ. ಈ ಗುಡಿಯ ಮುಂದೆ ಯಾವುದೇ ಮಂಟಪ ಇಲ್ಲ (ಬಹುಶಃ ಹಾನಿಗೊಳಗಾಗಿರಬಹುದು). ಹೊರಗಿನ ಗೋಡೆಗಳು ಎರಡು ಫಲಕಗಳನ್ನು ಪ್ರದರ್ಶಿಸುತ್ತವೆ. ಒಂದನ್ನು ಏಕಪಾದಮೂರ್ತಿ ಎಂದು ಕರೆಯಲಾಗುತ್ತದೆ. ಇದು ಶಿವನ ಕಣ್ಣು-ಕಾಲಿನ ರೂಪವಾಗಿದ್ದು, ಅವನ ಬದಿಗಳಿಂದ ಬ್ರಹ್ಮ ಮತ್ತು ವಿಷ್ಣು ಹೊರಹೊಮ್ಮುತ್ತಾರೆ. ಎರಡನೆಯ ಫಲಕವು ನಾಗರಾಜನದ್ದು. ಇದು ಐದು ಹೆಡೆಯ ಸರ್ಪದ ಕೆಳಗೆ ನಿಂತಿದೆ.[೫]

ದೊಡ್ಡ ಕ್ಷತ್ರಿಯಸಿಂಹೇಶ್ವರ ದೇವಸ್ಥಾನ ಮತ್ತು ರಾಜಸಿಂಹ ಪಲ್ಲವೇಶ್ವರ ದೇವಸ್ಥಾನದ ನಡುವಿನ ಸಣ್ಣ ಆಯತಾಕಾರದ ಗುಡಿಯಲ್ಲಿ ಅನಂತಶಯಿ ವಿಷ್ಣುವನ್ನು (ವಿಷ್ಣು ಹಾವಿನ ಮೇಲೆ ಮಲಗಿರುವ ಭಂಗಿ) ಪ್ರತಿಷ್ಠಾಪಿಸಲಾಗಿದೆ. ವಿಷ್ಣುವನ್ನು ನಾಲ್ಕು ತೋಳುಗಳಿಂದ ಚಿತ್ರಿಸಲಾಗಿದೆ ಆದರೆ ಅವನ ಗುಣಲಕ್ಷಣಗಳು ಕಾಣೆಯಾಗಿವೆ (ಹಾನಿಗೊಳಗಾಗಿವೆ). ದೇವಾಲಯ ರಚನೆಯ ಆಯತಾಕಾರದ ಗೋಪುರವು ಕಾಣೆಯಾಗಿದೆ. ಕುಡುಸ್‌ನ ವಿಶಿಷ್ಟ ವಿನ್ಯಾಸ ಮತ್ತು ಸಣ್ಣ ಚೌಕಾಕಾರದ ಗುಡಿಗಳು ಕಾರಣೆ ವ್ಯವಸ್ಥೆಯ ಭಾಗವಾಗಿವೆ. ಹೊರಗೋಡೆಗಳ ಮೇಲೆ ಕೃಷ್ಣನು ಕೇಶಿ ಎಂಬ ರಾಕ್ಷಸನನ್ನು ಸಂಹರಿಸುತ್ತಿರುವ, ಕೃಷ್ಣನು ಕಾಲೀಯನ ಮೇಲೆ (ಏಳು ಹೆಡೆಯ ಸರ್ಪ) ನೃತ್ಯ ಮಾಡುತ್ತಿರುವ ಮತ್ತು ಗಜೇಂದ್ರನನ್ನು (ಆನೆಯನ್ನು) ಮೊಸಳೆಯ ಬಾಯಿಂದ ರಕ್ಷಿಸುವ ಕ್ರಿಯೆಯಲ್ಲಿ ವಿಷ್ಣು ತನ್ನ ವಾಹನವಾದ ಗರುಡನ ಮೇಲೆ ಕುಳಿತಿರುವ ಕೆತ್ತನೆಗಳಿವೆ. ಪಲ್ಲವರ ಗ್ರಂಥ ಲಿಪಿಯಲ್ಲಿ ಗುರುತಿಸಲ್ಪಟ್ಟ ಶಾಸನವು ಹಾಸುಗಲ್ಲಿನ ಮೇಲಿದೆ. ಇದು ಸಂಕೀರ್ಣದ ಅತ್ಯಂತ ಮುಂಚಿನ ಗುಡಿಯಾಗಿದೆ ಎಂದು ಸೂಚಿಸುತ್ತದೆ.[೫]

ದೇವಾಲಯಗಳ ಸುತ್ತಲಿರುವ ಸಂಪೂರ್ಣ ಆವರಣ ಗೋಡೆಯ ಮೇಲೆ ಶಿವನ ವಾಹನವಾದ ನಂದಿಯ ದೊಡ್ಡ ಶಿಲ್ಪಗಳು, ಮತ್ತು ಯಾಳಿಗಳು ಹಾಗೂ ವರಾಹಗಳನ್ನು (ಹಂದಿಗಳು) ಕೆತ್ತಲಾಗಿದೆ.[೮]

ಏಕಶಿಲಾ ಸಿಂಹ ಬದಲಾಯಿಸಿ

ಚಿತ್ರ:Shore temple lion.jpg
ಮಹಿಷಾಸುರಮರ್ದಿನಿ ದುರ್ಗಾ ಸಿಂಹ ಗುಡಿ

ದೇವಾಲಯದ ಸಂಕೀರ್ಣದ ಆವರಣ ಗೋಡೆಯೊಳಗೆ ಅದರ ಮುಂಡದಲ್ಲಿ ರಂಧ್ರವಿರುವಂತೆ ಭಾಗಶಃ ಕೆತ್ತಲ್ಪಟ್ಟ ಮತ್ತು ಭಾಗಶಃ ಕೊರೆದ ಸಿಂಹದ ಏಕಶಿಲಾ ಶಿಲ್ಪವನ್ನು ನಿಲ್ಲಿಸಲಾಗಿದೆ. ವಿಗ್ರಹದ ಹಿಂಭಾಗದಲ್ಲಿ ದುರ್ಗೆಯ ಚಿಕಣಿ ವಿಗ್ರಹವನ್ನು ಕೆತ್ತಲಾಗಿದೆ. ಇದು ಮಹಿಷಾಸುರಮರ್ದಿನಿಯಾಗಿ ದುರ್ಗೆಯ ಚಿತ್ರಿಣವಾಗಿದೆ. ಸಿಂಹದ ತೆರೆದ ಬಾಯಿಯು ಅದು ನೆಚ್ಚಿನ ಸಿಂಹದ ಪಾತ್ರವನ್ನು ಪ್ರತಿನಿಧಿಸುತ್ತದೆ ಎಂದು ಊಹಿಸಲಾಗಿದೆ.[೫]

ಪ್ರತಿರೂಪದ ಗುಡಿ ಬದಲಾಯಿಸಿ

1990 ರಲ್ಲಿ, ಭಾರತೀಯ ಪುರಾತತ್ತ್ವ ಸರ್ವೇಕ್ಷಣೆಯು (ASI) ಒಂದು ಬಾವಿ ಮಾದರಿಯ ಆವರಣದಲ್ಲಿ ಭೂವರಾಹ ಚಿತ್ರವಿರುವ ಒಂದು ಚಿಕಣಿ ದೇಗುಲವನ್ನು ಕಂಡುಹಿಡಿಯಿತು. ಇದು ಪಲ್ಲವ ರಾಜ ನರಸಿಂಹವರ್ಮನ್ ಮಾಮಲ್ಲನ (ಕ್ರಿ.ಶ. 638–660) ಆಳ್ವಿಕೆಯ ಕಾಲದ್ದೆಂದು ನಿರ್ಧರಿಸಲಾಗಿದೆ. ಇದು ರಾಜಸಿಂಹನ (ಕ್ರಿ.ಶ. 700-728) ಅವಧಿಯಲ್ಲಿ ನಿರ್ಮಿಸಲಾದ ದೀರ್ಘವೃತ್ತದ ಬಾವಿಯಿಂದ ಸುತ್ತುವರಿಯಲ್ಪಟ್ಟಿತ್ತು. ಶೋರ್ ಟೆಂಪಲ್ ಸಂಕೀರ್ಣದಲ್ಲಿ ಮಲಗಿರುವ ವಿಷ್ಣುವನ್ನು ಹೊಂದಿರುವ ಆಧಾರಶಿಲೆಯ ಮೇಲೆ ಇವುಗಳನ್ನು ಕೆತ್ತಲಾಗಿದೆ.[೧೫] ಈ ಚಿಕಣಿ ಗುಡಿಯು ಶಿವನಿಗೂ ಸಮರ್ಪಿತವಾಗಿದೆ.[೧೬][೧೭]

 
ಶೋರ್ ಟೆಂಪಲ್ ಸಂಕೀರ್ಣದಲ್ಲಿರುವ ನೀರಿನ ಪುಷ್ಕರಿಣಿ

ಇದು ಹದಿನಾರು-ಬದಿಯ ತಳಹದಿಯನ್ನು ಹೊಂದಿದೆ. ಇದನ್ನು ಆಧಾರಶಿಲೆಯಿಂದ ಕೆತ್ತಲಾಗಿದೆ. ವೃತ್ತಾಕಾರದ ಗೋಡೆ ಮತ್ತು ಮೇಲ್ವಿನ್ಯಾಸವು ರಚನಾತ್ಮಕ ಪ್ರಕಾರದ್ದಾಗಿವೆ. ಚೌಕಸ್ಥಂಭಗಳ ಮೇಲೆ ಸಿಂಹಗಳನ್ನು ಕೆತ್ತಲಾಗಿದೆ. ಇದು ಪಲ್ಲವರ ಕಾಲದ ಇತರ ದೇವಾಲಯಗಳಲ್ಲಿ ಕಂಡುಬರದ ವಿಶಿಷ್ಟವಾದ ಒಂದೇ ಅಂತಸ್ತಿನ ದೇವಾಲಯವೆಂದು ವರದಿಯಾಗಿದೆ. ಇದರ ವೃತ್ತಾಕಾರದ ಶಿಖರವು ವೇಸರ ಶೈಲಿಯ ವಾಸ್ತುಕಲೆಯಲ್ಲಿದೆ.[೧೮] ಶಿಖರವನ್ನು ವೃತ್ತಾಕಾರದ ಗ್ರೀವದ ಮೇಲೆ ನಿರ್ಮಿಸಲಾಗಿದೆ. ಇದರ ನಾಲ್ಕು ಬದಿಗಳಲ್ಲಿ ಕುಡುಗಳು ಮತ್ತು ಮಹಾ-ನಾಸಿಕಗಳು ಇದ್ದು ಪ್ರತಿ ನಾಸಿಕವು ಗಣೇಶನ ವಿಗ್ರಹವನ್ನು ಹೊಂದಿದೆ. ಶಿಖರದ ಮೇಲಿನ ಕಳಸ ಕಾಣೆಯಾಗಿದೆ.[೫] ಭೂವರಾಹದ ಕೆತ್ತನೆಯು ವರಾಹವನ್ನು ವಿಷ್ಣುವಿನ ಹಂದಿಯ ಅವತಾರವಾಗಿ ಚಿತ್ರಿಸುತ್ತದೆ. ಈ ಚಿತ್ರವು ಅಸಾಮಾನ್ಯ ರೂಪದಲ್ಲಿದೆ. ದೇಶದ ಇತರ ಪ್ರದೇಶಗಳಲ್ಲಿನ ಮತ್ತೊಂದು ವರಾಹ ಚಿತ್ರಣದಂತೆ, ಭೂದೇವಿ ಅಥವಾ ಸಾಗರವನ್ನು ತೋರಿಸಲಾಗಿಲ್ಲ. ಭೂದೇವಿ ಅಥವಾ ತಾಯಿ ಭೂಮಿಯನ್ನು ರಕ್ಷಿಸಲು ವರಾಹವು ಸಾಗರಕ್ಕೆ ಧುಮುಕುವ ಕ್ರಿಯೆಯನ್ನು ಮಾಡುವ ರೂಪದಲ್ಲಿ ಇದರ ಚಿತ್ರಣವಿದೆ. ಈ ಕ್ರಿಯೆಯ ಸಾಂಕೇತಿಕತೆಯು ಪುರಾಣವನ್ನು ಸೂಚಿಸುತ್ತದೆ. ದೇವಾಲಯವು ನೀರಿನಲ್ಲಿ ಮುಳುಗಿದಾಗ ಮಾತ್ರ, ಅದು ನೆಲಮಟ್ಟದಿಂದ ಕೆಳಗಿರುತ್ತದೆ.[೫] ಶಿಲ್ಪವು ಮುರಿದುಹೋಗಿರುವುದನ್ನು ಕಾಣಬಹುದು ಮತ್ತು ತಳದ ಮೇಲೆ ಪಲ್ಲವ ರಾಜ ರಾಜಸಿಂಹನ ಬಿರುದುಗಳನ್ನು ಉಲ್ಲೇಖಿಸುವ ಶಾಸನವಿದೆ. ಸಮುದ್ರದಿಂದ ಮರಳಿನ ಒಳನುಗ್ಗುವಿಕೆಯನ್ನು ತಡೆಗಟ್ಟಲು ದೇವಾಲಯವನ್ನು ಸುತ್ತುವರೆದಿರುವ ಗೋಡೆಯು ಮೇಲಿನ ಪದರದ ಮೇಲೆ ಪಲ್ಲವ-ಗ್ರಂಥ ಲಿಪಿಯಲ್ಲಿರುವ ಶಾಸನವನ್ನು ಹೊಂದಿದೆ. ಇದು ರಾಜನನ್ನು ಅರ್ಜುನನೊಂದಿಗೆ ಸಮೀಕರಿಸುತ್ತದೆ.[೫][೧೯]

ಸಂರಕ್ಷಣೆ ಬದಲಾಯಿಸಿ

ದೇವಾಲಯವನ್ನು ಹೆಚ್ಚಿನ ಹಾನಿಯಿಂದ ರಕ್ಷಿಸಲು ಎಎಸ್‌ಐ ಸಮುದ್ರ ತೀರದ ಸುತ್ತಲೂ ಒಡ್ಡು ಗೋಡೆಯನ್ನು ನಿರ್ಮಿಸಿದೆ.[೫] ರಕ್ಷಣಾತ್ಮಕ ತೀರಗೋಡೆಗಳನ್ನು ನಿರ್ಮಿಸಿ, ಗೋಡೆ ಕಾಗದದ ತಿರುಳಿನಿಂದ ಸಂಸ್ಕರಿಸಿ ಮತ್ತು ಪೀಡಿತ ಕರಾವಳಿಯ ಉದ್ದಕ್ಕೂ ಕ್ಯಾಸುವರೀನಾ ಮರಗಳನ್ನು ನೆಡುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಪ್ರಕ್ಷುಬ್ಧ ಸಮುದ್ರ ಮತ್ತು ಉಪ್ಪಿನಂಶವಿರುವ ಗಾಳಿಯಿಂದ ಪ್ರಭಾವಿತವಾಗಿರುವ ದೇವಾಲಯದ ರಚನೆಗಳನ್ನು ಸಂರಕ್ಷಿಸುತ್ತಿದೆ. ತಿರುಳು ಸಂಸ್ಕರಣೆಯು ಲವಣಯುಕ್ತ ನೀರನ್ನು ಹೀರಿಕೊಳ್ಳುತ್ತದೆ. ಇದಲ್ಲದೆ, ಬಂಡೆಯೊಳಗೆ ನೀರು ಸೋರಿಕೆಯನ್ನು ತಡೆಯಲು ಸ್ಮಾರಕಕ್ಕೆ ರಾಸಾಯನಿಕ ಸಂಸ್ಕರಣೆಯನ್ನು ಸಹ ಮಾಡಲಾಗುತ್ತದೆ. ಈ ರೀತಿಯ ಸಂಸ್ಕರಣೆಯು ಬಂಡೆಯೊಳಗೆ ಸಂಗ್ರಹವಾಗಿರುವ ನೀರನ್ನು ಹೊರತೆಗೆಯುತ್ತದೆ ಎಂದೂ ವರದಿಯಾಗಿದೆ. ಇದರಿಂದಾಗಿ ಕಲ್ಲು ಉಸಿರಾಡಲು ಮತ್ತು ಅದರ ಶಕ್ತಿಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಶೋರ್ ಟೆಂಪಲ್ ಸುತ್ತಲಿನ ಪ್ರದೇಶವನ್ನು ಸುಂದರಗೊಳಿಸಲಾಗಿದೆ. ASI ಯ ತೋಟಗಾರಿಕೆ ವಿಭಾಗವು ಶೋರ್ ಟೆಂಪಲ್ ಸುತ್ತಲೂ 11 ಎಕರೆ (4.4 ಹೆಕ್ಟೇರ್) ಹಸಿರು ಹುಲ್ಲುಹಾಸನ್ನು ರಚಿಸಿದೆ. ಸ್ಮಾರಕಗಳ ಮೇಲೆ ಮಾಹಿತಿಯುಳ್ಳ ಸೂಚನಾ ಫಲಕಗಳನ್ನು ಸರಿಪಡಿಸುವುದು ಮತ್ತು ಕಾರಂಜಿಗಳನ್ನು ರಚಿಸುವುದು ಸಹ ASI ಯೋಜಿಸಿರುವ ಸುಂದರೀಕರಣ ಕಾರ್ಯಕ್ರಮದ ಭಾಗವಾಗಿತ್ತು.[೨೦]

ಚಿತ್ರಸಂಪುಟ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "World Heritage Sites – Mahabalipuram: Group of Monuments Mahabalipuram (1984), Tamil Nadu". Archaeological Survey of India by National Informatics Centre. Retrieved 30 December 2012.
  2. ೨.೦ ೨.೧ "The Shore Temple,Mamallapuram". Onlinenu Library of Encyclopædia Britannica. Archived from the original on 5 ಮಾರ್ಚ್ 2016. Retrieved 30 December 2012.
  3. ೩.೦ ೩.೧ ೩.೨ ೩.೩ Ching, Frank; Jarzombek, Mark; Prakash, Vikramaditya (2007). A Global History of Architecture. New York: John Wiley and Sons. pp. 274. ISBN 978-0-471-26892-5.
  4. "Group of Monuments at Mahabalipuram". World Heritage. Retrieved 2007-02-08.
  5. ೫.೦೦ ೫.೦೧ ೫.೦೨ ೫.೦೩ ೫.೦೪ ೫.೦೫ ೫.೦೬ ೫.೦೭ ೫.೦೮ ೫.೦೯ ೫.೧೦ ೫.೧೧ ೫.೧೨ ೫.೧೩ "Mahabalipuram – The Workshop of Pallavas – Part V". Shore Temple. Puratatva.com. 14 September 2010. Archived from the original on 23 January 2014. Retrieved 27 February 2013.
  6. "Mahabalipuram". USCLA Education, South Asia. Retrieved 30 December 2012.
  7. National Geographic (21 October 2008). Sacred Places of a Lifetime: 500 of the World's Most Peaceful and Powerful Destinations. National Geographic Books. pp. 154–. ISBN 978-1-4262-0336-7. Retrieved 7 February 2013.
  8. ೮.೦ ೮.೧ "The Shore Temple stands its ground". The Hindu. 30 December 2004. Archived from the original on 30 December 2004. Retrieved 30 December 2012.
  9. Thapar, Binda (2004). Introduction to Indian Architecture. Singapore: Periplus Edition. p. 51. ISBN 978-0-7946-0011-2.
  10. "The Shore Temple stands its ground". The Hindu. Chennai, India. 2004-12-30. Archived from the original on 2004-12-30. Retrieved 2007-02-08.
  11. Michael, George (198). The Hindu Temple. Chicago, Illinois: University of Chicago. pp. 134–135. ISBN 978-0-226-53230-1.
  12. "Mamallapuram". Art and Archaeology.com. Retrieved 30 December 2012.
  13. "Somaskanda". Art and Archaeology.com. Retrieved 27 February 2013.
  14. Ghose, Rajeshwari (1 January 1996). The Lord of Ārūr: The Tyāgarāja Cult in Tamilnāḍu : a Study in Conflict and Accommodation. Motilal Banarsidass. pp. 12, 36–. ISBN 978-81-208-1391-5. Retrieved 27 February 2013.
  15. "World Heritage Sites – Mahabalipuram – Excavated Remains". Archaeological Survey of India through National Informatics Centre. Retrieved 27 February 2013.
  16. "Vṛṣabhavāhanamūrti in Literature and Art". Annali del Istituto Orientale, Naples. 56 (3): 305–10. 1996. {{cite journal}}: |first= missing |last= (help)
  17. Rock-cut Model Shrines in Early Medieval Indian Art (in ಇಂಗ್ಲಿಷ್).
  18. Rajarajan, R. K. K. "Vṛṣabhavāhanamūrti in Literature and Art". Annali del Istituto Orientale, Naples (in ಇಂಗ್ಲಿಷ್).
  19. "World Heritage Sites – Mahabalipuram – Excavated Remains". Archaeological Survey of India through National Informatics Centre. Retrieved 30 December 2012.
  20. "A monumental effort". Front Line India's National Magazine from the publishers of The Hindu. 8 November 2003. Archived from the original on 10 April 2013. Retrieved 27 February 2013.

ಹೊರಗಿನ ಕೊಂಡಿಗಳು ಬದಲಾಯಿಸಿ