ಪೀಠಾಧಿಪತಿಗಳು, ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮ

ಶರಣರು, ಸೂಫಿಗಳು, ಸಂತರ ನಾಡಿನಲ್ಲಿ ಮತ್ತೆ ಸುಸಂಸ್ಕøತಿಯನ್ನು ಬಿತ್ತಿ, ಬೆಳೆಸುತ್ತಿರುವವರು ಪರಮ ಪೂಜ್ಯ [೧]ಶ್ರೀ ಡಾ. ಬಸವಲಿಂಗ ಅವಧೂತರು.

ಪೀಠಾಧಿಪತಿಗಳು, ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮ
ಡಾ. ಬಸವಲಿಂಗ ಅವಧೂತರು


ಮೇರು ಪರ್ವತ ಹಿಮಾಲಯ, ಕಾಶಿ, ಶ್ರೀಶೈಲ ಸೇರಿ ದೇಶದ ವಿವಿಧೆಡೆ ಲೋಕ ಕಲ್ಯಾಣಕ್ಕಾಗಿ ತಪಸ್ಸುಗೈದ ಶ್ರೀಗಳು ಪ್ರಖರ ವಾಗ್ಮಿಗಳು. ಕೋಟ್ಯಂತರ ಭಕ್ತರ ಆರಾಧ್ಯ ದೈವವೂ ಹೌದು.

ನಾಟಿ ವೈದ್ಯರು ಸಹ ಆಗಿರುವ ಇವರು ತಮ್ಮನ್ನು ನಂಬಿಕೊಂಡು ಬಂದ ಅನೇಕ ಭಕ್ತರನ್ನು ಕಾಯಿಲೆಗಳಿಂದ ಮುಕ್ತಗೊಳಿಸಿದ್ದಾರೆ. ಬಹಳಷ್ಟು ಜನರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ. ಪೋಷಕರಿಗೆ ಮಕ್ಕಳನ್ನು ಬೆಳೆಸುವ ಪರಿ ಹೇಳಿಕೊಡುತ್ತಿದ್ದಾರೆ. ಸಂಸ್ಕಾರದ ಮಹತ್ವ ಮನವರಿಕೆ ಮಾಡುತ್ತಿದ್ದಾರೆ. ದುಶ್ಚಟಗಳ ವಿರುದ್ಧ ಯುವ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಭ್ರಾತೃತ್ವ, ಐಕ್ಯತೆ ಸಂದೇಶ ಸಾರುತ್ತಿದ್ದಾರೆ. ದೇಶ ಭಕ್ತಿ, ದೇಶ ಪ್ರೇಮ ಬೆಳೆಸುತ್ತಿದ್ದಾರೆ. ಸಾಮಾಜಿಕ ಪರಿವರ್ತನೆಗೆ ಅವಿರತ ಶ್ರಮಿಸುತ್ತಿದ್ದಾರೆ.

ಶ್ರೀಗಳ ಪೂವಾಶ್ರಮ

ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ತಾಲ್ಲೂಕಿನ ನ್ಯಾಲಕಲ್ ಮಂಡಲ ವ್ಯಾಪ್ತಿಯ ರತ್ನಾಪುರ ಗ್ರಾಮದ ಸುಸಂಸ್ಕøತ ಲಿಂಗಾಯತ ದಿಕ್ಷಾವಂತರ ಕುಟುಂಬದ ರಾಚಪ್ಪ ಮೂಲಗೆ- ಬಂಡೆಮ್ಮ ದಂಪತಿಯ ಮೂರನೇ ಸುಪುತ್ರರಾಗಿ 1976 ರ ಜೂನ್ 26 (ಗುರು ಪೂರ್ಣಿಮೆ) ರಂದು ಡಾ. ಬಸವಲಿಂಗ ಅವಧೂತರು ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಬಸವರಾಜ ಮೂಲಗೆ.

ಶಿಕ್ಷಣ

ಸ್ವಗ್ರಾಮ ರತ್ನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರಾಭ್ಯಾಸ ಆರಂಭಿಸಿದರು. ಒಂದರಿಂದ ಏಳನೇ ತರಗತಿ ಶಿಕ್ಷಣ ಅಲ್ಲಿಯೇ ಪೂರೈಸಿದರು. ಬೀದರ್‍ನ ಪ್ರತಿಷ್ಠಿತ ಎನ್.ಎಫ್.ಎಚ್.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ, ಪದವಿಪೂರ್ವ, ಕವಿರತ್ನ ಕಾಳಿದಾಸ ಪದವಿ ಕಾಲೇಜಿನಲ್ಲಿ ಬಿ.ಎ ಶಿಕ್ಷಣ ಮುಗಿಸಿದರು. ಭಾಲ್ಕಿ ತಾಲ್ಲೂಕಿನ ನಿಟ್ಟೂರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಪೂರ್ಣಗೊಳಿಸಿದರು. ಬಳಿಕ ಧಾರವಾಡಕ್ಕೆ ತೆರಳಿ, ಅಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಮತ್ತು ಎಂ.ಎ ಫಿಲಾಸಫಿ ಸ್ನಾತಕೋತ್ತರ ಪದವಿ ಪೂರೈಸಿದರು. ಪದವಿಯಲ್ಲಿ ಚಿನ್ನದ ಪದಕಕ್ಕೂ ಭಾಜನರಾದರು. ದೆಹಲಿಯಲ್ಲಿ ಯುಪಿಎಸ್‍ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದರು.

ಆಧ್ಯಾತ್ಮಿಕ ಒಲವು

ಪದವಿ ವ್ಯಾಸಂಗದಲ್ಲಿದ್ದಾಗಲೇ ಶ್ರೀಗಳು ಆಧ್ಯಾತ್ಮಿಕ ಒಲವು ಬೆಳೆಸಿಕೊಂಡರು. ಶಿಕ್ಷಣ ಪೂರ್ಣಗೊಳಿಸಿದ ನಂತರ ಹಿಮಾಲಯ ಪರ್ವತದಲ್ಲಿ ತಪಸ್ಸುಗೈದರು. ಕಾಶಿ, ಶ್ರೀಶೈಲ, ಹರಿದ್ವಾರ, ಋಷಿಕೇಶ, ಬದ್ರಿನಾಥ, ಕೇದಾರನಾಥ ಮೊದಲಾದ ಕಡೆಗಳಲ್ಲಿಯೂ ತಪೋ ಅನುಷ್ಠಾನಗೈದು, 2006 ರಲ್ಲಿ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಕುಪ್ಪಾನಗರ-ಚಿಲ್ಲಾಪಲ್ಲಿ ಮಧ್ಯದಲ್ಲಿ ಇರುವ ಮಲ್ಲಯ್ಯಗಿರಿಗೆ ಬಂದು ನೆಲೆಸಿದರು.

ಆರಾಧ್ಯ ದೈವ

ಜಗನ್ಮಾತ ಅಕ್ಕಮಹಾದೇವಿ

ಜ್ಞಾನ ಗುರು

ಪರಮ ಹಂಸ ಪಾಗಲ್ ಬಾಬಾ ಅವರಿಂದ ಜ್ಞಾನ ದೀಕ್ಷೆ ಪಡೆದು, ಲೋಕ ಕಲ್ಯಾಣಕ್ಕೆ ಸಮರ್ಪಿಸಿಕೊಂಡರು.

ಆಶ್ರಮಗಳು

ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಜತೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ದೇಗಲಮಡಿಯಲ್ಲಿ ಇವರ ಆಶ್ರಮಗಳು ಇವೆ. ಎಲ್ಲ ಆಶ್ರಮಗಳಲ್ಲಿ ನಿರಂತರ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ಧಾರ್ಮಿಕ ಸೇವೆ

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಆಧಾತ್ಮಿಕ ಕಾರ್ಯಕ್ರಮಗಳ ಮೂಲಕ ಜನರಿಗೆ ಸನ್ಮಾರ್ಗ ತೋರುತ್ತಿದ್ದಾರೆ. ನಗರ, ಪಟ್ಟಣ, ಗ್ರಾಮಗಳು ಸೇರಿದಂತೆ 2,500ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರವಚನ ನಡೆಸಿಕೊಟ್ಟು, ಆಧ್ಯಾತ್ಮದ ಸವಿ ಉಣಬಡಿಸಿದ್ದಾರೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಪ್ರವಚನ ನೀಡುವ ಕಾರಣ ಇವರ ಕಾರ್ಯಕ್ರಮಗಳಿಗೆ ಜನಸಾಗರವೇ ಹರಿದು ಬರುತ್ತದೆ. ಪ್ರತಿ ಹುಣ್ಣಿಮೆಯಂದು ಮಲ್ಲಯ್ಯಗಿರಿ ಆಶ್ರಮದಲ್ಲಿ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವುದು ವಿಶೇಷ. ಆಶ್ರಮದಲ್ಲಿ ವರ್ಷದಲ್ಲಿ ಐದಾರು ಯೋಗ-ಧ್ಯಾನ ಶಿಬಿರಗಳನ್ನು ಆಯೋಜಿಸಿ, ಭಕ್ತರಿಗೆ ಯೋಗ ಸಾಧನೆ ಹೇಳಿಕೊಡುತ್ತಾರೆ.


ಸಾಹಿತ್ತಿಕ ಸೇವೆ

ಆಧ್ಯಾತ್ಮಿಕ ಜಾಗೃತಿ ಜತೆಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ‘ಒಲಿದು ಹಾಡಿದ ಹೃದಯ ಗೀತೆ’, ‘ಅನುಭಾವಾಮೃತ’ (ತೆಲುಗು ಹಾಡು), ಸತ್ಯ ಶುದ್ಧ (ಆಧುನಿಕ ವಚನ ರಚನೆ) ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇವರ ವಚನಗಳ ಅಂಕಿತ ನಾಮ ‘ಘನಯೋಗಿ ಮಲ್ಲಿನಾಥ’. ಶ್ರೀಗಳ ಸುಮಧುರ ಕಂಠಸಿರಿಯ ಹಾಡು ಕೇಳುವುದೆಂದರೆ ಭಕ್ತರಿಗೆ ಬಲು ಖುಷಿ. ಜನಪದ ಶೈಲಿಯ ಶ್ರೀಗಳ ಹಾಡುಗಳು ಭಕ್ತರ ಮನ ತಟ್ಟುತ್ತವೆ. ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುತ್ತವೆ.

ಭಾಷಾ ಜ್ಞಾನ

ಕನ್ನಡ, ಹಿಂದಿ, ತೆಲುಗು, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಪ್ರವಚನ ಮಾಡುವ ಹಿರಿಮೆ ಶ್ರೀಗಳದ್ದು. ಆಯಾ ಪ್ರದೇಶಗಳಿಗೆ ಹೋದಾಗ ಅಲ್ಲಿಯ ಭಾಷೆಗಳಲ್ಲಿಯೇ ಪ್ರವಚನ ನೀಡುತ್ತಾರೆ.

ದಾಸೋಹ

ಮಲ್ಲಯ್ಯಗಿರಿ ಆಶ್ರಮದಲ್ಲಿ ಭಕ್ತರಿಗೆ ನಿತ್ಯ ನಿರಂತರ ದಾಸೋಹ ವ್ಯವಸ್ಥೆ ಇದೆ. ಹಬ್ಬ, ಹರಿದಿನಗಳಲ್ಲಿ ಸಿಹಿ ತಿಂಡಿ ವ್ಯವಸ್ಥೆಯೂ ಇರುತ್ತದೆ.

ದಿನಚರಿ

ನಸುಕಿನಲ್ಲೇ ಶ್ರೀಗಳ ದಿನಚರಿ ಶುರುವಾಗುತ್ತದೆ. ನಸುಕಿನ ಜಾವ 3.30ಕ್ಕೆ ಏಳುವ ಶ್ರೀಗಳು, ನಿತ್ಯ ಕರ್ಮ ಮುಗಿಸಿ 4ಕ್ಕೆ ಪೂಜೆ ಧ್ಯಾನದಲ್ಲಿ ಮಗ್ನರಾಗುತ್ತಾರೆ. ಬೆಳಿಗ್ಗೆ 6.30 ರಿಂದ 7.30 ರ ವರೆಗೆ ದಿನ ಪತ್ರಿಕೆ, ಪುಸ್ತಕ ಓದುತ್ತಾರೆ. ಹೊಸ ಹಾಡು, ಸಾಹಿತ್ಯ ರಚನೆಯಲ್ಲಿ ನಿರತರಾಗುತ್ತಾರೆ. ಬೆಳಿಗ್ಗೆ 7.30 ರಿಂದ ಭಕ್ತರ ದರ್ಶನಕ್ಕೆ ಲಭ್ಯರಾಗುತ್ತಾರೆ. ಸಂಜೆ ನಗರ,  ಪಟ್ಟಣ, ಗ್ರಾಮಗಳಲ್ಲಿ ಪ್ರವಚನ ನೀಡುತ್ತಾರೆ. ರಾತ್ರಿ ಆಶ್ರಮಕ್ಕೆ ಮರಳಿ, ಕೆಲ ಹೊತ್ತು ಧ್ಯಾನ ಮಾಡುತ್ತಾರೆ. ರಾತ್ರಿ 11.30ಕ್ಕೆ ನಿದ್ರೆಗೆ ಜಾರುತ್ತಾರೆ.

ಆಹಾರ ಕ್ರಮ

ಬೆಳಿಗ್ಗೆ ಒಂದು ಗ್ಲಾಸ್ ಹಣ್ಣಿನ ರಸ ಹಾಗೂ ಕಾಳು ಸೇವಿಸುತ್ತಾರೆ. ರಾತ್ರಿ ಒಂದು ಗ್ಲಾಸ್ ಸಿರಿಧಾನ್ಯದ ಗಂಜಿ ಹಾಗೂ ಹಣ್ಣು ಸೇವಿಸುತ್ತಾರೆ.

ಪ್ರಶಸ್ತಿ, ಸಮ್ಮಾನ

ಶ್ರೀಗಳ ಸಮಾಜೋಧಾರ್ಮಿಕ ಕಾರ್ಯಗಳಿಗೆ ಮಠ ಮಾನ್ಯಗಳು ಹಾಗೂ ಪ್ರತಿಷ್ಠಿತ ಸಂಘ- ಸಂಸ್ಥೆಗಳಿಂದ ಅನೇಕ ಪ್ರಶಸ್ತಿ, ಸಮ್ಮಾನಗಳು ಸಂದಿವೆ. ಜರ್ಮನಿಯ ಇಂಟರ್‍ನ್ಯಾಷನಲ್ ಪೀಸ್ ವಿಶ್ವವಿದ್ಯಾಲಯವು 2020 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ವಿಳಾಸ

ಮಲ್ಲಯ್ಯಗಿರಿ ಆಶ್ರಮ, ಕುಪ್ಪಾನಗರ- ಚಿಲ್ಲಾಪಲ್ಲಿ, ಝರಾಸಂಗಮ ಮಂಡಲ, ಜಹೀರಾಬಾದ್ ತಾಲ್ಲೂಕು, ಸಂಗಾರೆಡ್ಡಿ ಜಿಲ್ಲೆ -585307

ದೇಗಲಮಡಿ ಆಶ್ರಮ, ಚಿಂಚೋಳಿ ತಾಲ್ಲೂಕು ಕಲಬುರಗಿ ಜಿಲ್ಲೆ-502032

ಉಲ್ಲೇಖ ಬದಲಾಯಿಸಿ

  1. https://basavalingaavadhoota.org/