ಫ್ರೆಂಚ್ ಕ್ರಾಂತಿ (೧೭೯೮೧೭೯೯) ಫ್ರಾನ್ಸ್ ದೇಶದ ಇತಿಹಾಸದಲ್ಲಿ ಉಂಟಾದ ಒಂದು ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿ. ಇದರಿಂದ ಫ್ರಾನ್ಸ್ ಚಕ್ರಾಧಿಪತ್ಯ ಹೊಂದಿದ್ದ ದೇಶದಿಂದ ಗಣರಾಜ್ಯವಾಗಿ ಪರಿವರ್ತನಗೊಂಡಿತು.ರಾಷ್ಟ್ರೀಯತವಾದ ಮತ್ತು ಮಾನವ ಹಕ್ಕುಗಳ ಕಲ್ಪನೆಗಳು ಇತಿಹಾಸದಲ್ಲಿ ಪ್ರಾಮುಖ್ಯತೆಗೆ ಬರಲು ಈ ಕ್ರಾಂತಿ ಒಂದು ಪ್ರಮುಖ ಕಾರಣ.

೧೭೮೯ರ ಮಾನವ ಹಕ್ಕುಗಳು ಹಾಗು ನಾಗರೀಕ ಪೌರತ್ವ ಘೋಷಣೆ (ಡಿಕ್ಲೆರೇಷನ್ ಆ ರೈಟ್ಸ್ ಆಫ್ ಮ್ಯಾನ್ ಅಂಡ್ ಸಿಟಿಜನ್)

ಕಾರಣಗಳು ಬದಲಾಯಿಸಿ

ಫ್ರೆಂಚ್ ಸಮಾಜದ ವಿಭಾಗ ಬದಲಾಯಿಸಿ

 
ಒಂದನೇ ಹಾಗು ಎರಡನೇ ಎಸ್ಟೇಟ್ ದರ್ಜೆಗೆ ಸೇರಿದವರನ್ನು ಮೂರನೇ ಎಸ್ಟೇಟ್ ದರ್ಜೆಯ ವ್ಯಕ್ತಿ ಎತ್ತಿ ಹಿಡಿರುವ ವಿಡಂಬನಾತ್ಮಕ ಚಿತ್ರ ಕಲಾವಿದನ ಕಲ್ಪನೆಯಲ್ಲಿ.

೧೮ನೇ ಶತಮಾನದಲ್ಲಿ ಫ್ರೆಂಚ್ ಸಮಾಜವು ಪ್ರಮುಖ ಮೂರು ವಿಭಾಗಗಳಾಗಿತ್ತು- ಊಳಿಗಮಾನ್ಯ ಪದ್ಧತಿಯ ಮುಂದುವರಿದ ಭಾಗದಂತೆ ತೋರುವ ಈ ವಿಂಗಡಣೆಯ ವಿವಿಧ ಮಜಲುಗಳಿಗೆ 'ಎಸ್ಟೇಟ್' ಎಂದು ಕರೆಯಲಾಗುತ್ತಿತ್ತು. ಅರ್ಥಾತ್ ಮೂರು ಎಸ್ಟೇಟ್ ದರ್ಜೆಗಳು ಪ್ರೆಂಚ್ ಸಮಾಜದಲ್ಲಿ ಚಾಲ್ತಿಯಲ್ಲಿದ್ದವು. ಅವುಗಳೆಂದರೆ,

  • ಎಸ್ಟೇಟ್ ೧ : ಕ್ರೈಸ್ತ ಪಾದ್ರಿಗಳು ಹಾಗೂ ಚರ್ಚ್ ಗೆ ಸಂಬಂಧಪಟ್ಟ ಇನ್ನಿತರ ಪ್ರಮುಖ ವ್ಯಕ್ತಿಗಳು.
  • ಎಸ್ಟೇಟ್ ೨ : ರಾಜನ ಆಸ್ಥಾನದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸುವ, ಉಚ್ಚ ಶಿಕ್ಷಿತ ವರ್ಗದ ವ್ಯಕ್ತಿಗಳು.
  • ಎಸ್ಟೇಟ್ ೩ : ದೊಡ್ಡ ವ್ಯಾಪಾರಿಗಳು, ವ್ಯವಹಾರ ತಜ್ಞರು, ನ್ಯಾಯಾಲಯಕ್ಕೆ ಸಂಬಂಧಪಟ್ಟ ವ್ಯಕ್ತಿಗಳು, ರೈತರು, ಕಲಾವಿದರು, ಸಣ್ಣ ಹಿಡುವಳಿದಾರರು, ಕೂಲಿ ಕಾರ್ಮಿಕರು, ಸೇವಕರು.

ಇದರಲ್ಲಿ ಪ್ರಮುಖವಾದ ವಿಭಿನ್ನತೆಯೆಂದರೆ ೧ ಹಾಗು ೨ನೇ ಎಸ್ಟೇಟ್ ದರ್ಜೆಯವರು ಫ್ರೆಂಚ್ ಸಮಾಜದ ಒಟ್ಟು ಜನಸಂಖ್ಯೆಯ ಕೇವಲ ೧೦% ದಷ್ಟು ಮಾತ್ರವಿದ್ದರು. ಇನ್ನುಳಿದ ೯೦% ಜನ ೩ ನೇ ಎಸ್ಟೇಟ್ ದರ್ಜೆಗೆ ಸೇರಿದವರಾಗಿದ್ದರು ಹಾಗು ಅವರು ಮಾತ್ರ ತೆರಿಗೆ ಕಟ್ಟುತ್ತಿದ್ದರು. ಇನ್ನುಳಿದ ಎಸ್ಟೇಟ್ ನವರಿಗೆ ತೆರಿಗೆ ಪಾವತಿಯಲ್ಲಿ ಸಂಪೂರ್ಣ ಸಡಿಲಿಕೆಯನ್ನು ಕೊಡಮಾಡಲಾಗಿತ್ತು. ಪ್ರಮುಖವಾಗಿ ೧ ಹಾಗು ೨ ನೇ ಎಸ್ಟೇಟ್ ನವರೆಲ್ಲರೂ ಉಚ್ಚ ಶಿಕ್ಷಿತ ವರ್ಗದವರು ಹಾಗು ರಾಜ ಪ್ರಭುತ್ವದಲ್ಲಿ ಅಪಾರ ಹಿಡಿತ ಉಳ್ಳವರಾಗಿದ್ದರು. ಈ ಭಿನ್ನತೆ ೩ ನೇ ಎಸ್ಟೇಟ್ ಗೆ ಸೇರಿದವರಲ್ಲಿ ರೊಚ್ಚಿಗೇಳುವಂತೆ ಮಾಡಿತ್ತು.

೧೬ನೇ ಲೂಯಿಸ್ ನ ಆಳ್ವಿಕೆ ಬದಲಾಯಿಸಿ

 
೧೬ನೇ ಲೂಯಿಸ್

೧೭೭೪ರಲ್ಲಿ ೧೬ನೇ ಲೂಯಿಸ್ ಫ್ರೆಂಚ್ ಅರಮನೆಯ ಸಿಂಹಾಸನ ಏರಿದ.ಲೂಯಿಸ್ ಸಿಂಹಾಸನವೇರಿದಾಗ ಆತನ ವಯಸ್ಸು ಕೇವಲ ೨೦ ವರ್ಷಗಳಷ್ಟೇ. ಅಷ್ಟರಲ್ಲಾಗಲೇ ಆಸ್ಟ್ರಿಯಾ ದೇಶದ ರಾಜಕುಮಾರಿ ಮೇರಿ ಅಂಟಾಯ್ನೆಟ್ಳನ್ನು ಮದುವೆಯಾಗಿದ್ದ ಆತ ರಾಜ ಪದವಿಗೆ ಬಂದಾಕ್ಷಣ ಕಂಡಿದ್ದು ಖಾಲಿ ಬೊಕ್ಕಸವನ್ನು ಮಾತ್ರ. ಆ ಹಿಂದೆ ಫ್ರಾನ್ಸ್ ನಲ್ಲಿ ನಡೆದಿದ್ದ ಯುದ್ಧಗಳಿಂದ ಹೈರಾಣಾಗಿದ್ದ ಫ್ರಾನ್ಸ್ ಸಮಾಜ ಹೊಸ ರಾಜನಿಗೆ ಖಾಲಿ ಬೊಕ್ಕಸವನ್ನು ಕೊಡಲಷ್ಟೇ ಶಕ್ತವಾಗಿತ್ತು. ಆ ಹೊತ್ತಿಗಾಗಲೇ ಫ್ರಾನ್ಸ್ ತನ್ನ ಸರ್ಕಾರಿ ಕಚೇರಿ, ನ್ಯಾಯಾಲಯಗಳನ್ನೂ ನಡೆಸಲಾರದಷ್ಟು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುತ್ತದೆ. ಇದಷ್ಟೇ ಅಲ್ಲದೆ ವರ್ಸೆಲ್ಸ್ ನಗರದಲ್ಲಿದ್ದ ೧೪ ನೇ ಲೂಯಿಸ್ ನಿರ್ಮಾಣ ಮಾಡಿಸಿದ ವೈಭವೋಪೇತ ಅರಮನೆಯ ದಿನ ನಿತ್ಯದ ಕಾರ್ಯ ಕಲಾಪಗಳನ್ನು ನಡೆಸುವುದು ಬಹು ಖರ್ಚಿನ ವಿಚಾರವಾಗಿರುತ್ತದೆ. ಇಷ್ಟೆಲ್ಲಾ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಈಗಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಹದಿಮೂರು ರಾಜ್ಯಗಳನ್ನು ಬ್ರಿಟಿಷರಿಂದ ಮುಕ್ತವಾಗಿಸಿ ಸ್ವಾತಂತ್ರ್ಯ ಕೊಡಿಸುವ ಸಲುವಾಗಿ ಫ್ರಾನ್ಸ್ ರಾಜ ಸರ್ಕಾರ ಸುಮಾರು ೧ ಬಿಲಿಯನ್ ಲಿವರೆಸ್ (ಆಗಿನ ಫ್ರಾನ್ಸ್ ಹಣ, ೧೭೯೪ ರಿಂದ ಇದು ಅಸ್ತಿತ್ವದಲ್ಲಿಲ್ಲ) ನಷ್ಟು ಸಾಲದ ಹೊರೆಗೆ ಸಿಲುಕುತ್ತದೆ. ಇವೆಲ್ಲವುಗಳನ್ನು ಸರಿದೂಗುವ ಸಲುವಾಗಿ ಫ್ರಾನ್ಸ್ ಸರ್ಕಾರದ ಎಲ್ಲ ತೆರಿಗೆಗಳನ್ನು ತೀವ್ರವಾಗಿ ಏರಿಸಲಾಯಿತು.ಆದರೆ ತೆರಿಗೆಗಳಿಗೆ ತಕ್ಕುದಾಗಿ ಕಾರ್ಮಿಕರ ಹಾಗು ಇನ್ನಿತರ ದುಡಿಯುವ ವರ್ಗದವರ ವೇತನಗಳು ಹೆಚ್ಚಾಗುವುದಿಲ್ಲ.ಇದು ದುಡಿಯುವ ವರ್ಗದವರನ್ನು ಸರ್ಕಾರದ ವಿರುದ್ಧ ರೊಚ್ಚಿಗೇಳುವಂತೆ ಮಾಡುವಂತೆ.ಒಟ್ಟು ಜನ ಸಂಖ್ಯೆಯ ೯೦% ವರ್ಗದವರು ದುಡಿಯುವ ವರ್ಗದವರಾದ ಕಾರಣ ತನ್ನದೇ ಸಮಾಜದಲ್ಲಿ ಸರ್ಕಾರದ ವಿರುದ್ಧ ಅಸಹಿಷ್ಣುತೆ ಹೊಗೆಯಾಡುತ್ತಿರುವುದನ್ನು ೧೬ನೇ ಲೂಯಿಸ್ ಸುಲಭವಾಗಿ ಅರ್ಥ ಮಾಡಿಕೊಂಡ.ಈ ವಿರೋಧಾಭಾಸವನ್ನು ತಹಬದಿಗೆ ತರಲು ೧೬ನೇ ಲೂಯಿಸ್ ಜುಲೈ ೧೪, ೧೭೮೯ರಂದು ತನ್ನ ಸೈನ್ಯಕ್ಕೆ ಪ್ಯಾರಿಸ್ ನಗರಕ್ಕೆ ಮುನ್ನುಗ್ಗಲು ನಿರ್ದೇಶಿಸಿದ. ಜನರು ಸರ್ಕಾರದ ವಿರುದ್ಧವಿದ್ದುದರಿಂದ ಸೈನ್ಯ ತಮ್ಮ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸುತ್ತದೆ ಎಂಬ ಗಾಳಿ ಮಾತಿಗೆ ಚಾಲ್ತಿ ಕೊಟ್ಟಿತು ಫ್ರಾನ್ಸ್ ಜನ ಸಮೂಹ.ಆ ಭಯದ ಕಾರಣದಿಂದ ಫ್ರಾನ್ಸ್ ನ ೩ನೇ ಎಸ್ಟೇಟ್ ಗೆ ಸೇರಿದ ಜನರು ಆಕ್ರಮಣಕಾರಿ ರೂಪದಲ್ಲಿ ಕ್ರಾಂತಿಯಲ್ಲಿ ಪಾಲ್ಗೊಂಡರು[೧].

ಬೆಲೆ ಏರಿಕೆ ಬದಲಾಯಿಸಿ

ಬೆಲೆ ಏರಿಕೆಯಾಗಿ ನೌಕರರ ವೇತನಗಳು ಏರಿಕೆಯಾಗದೆ ಇದ್ದುದರಿಂದ ದುಡಿಯುವ ವರ್ಗದ ಜನರು ಅತೀವ ಹಣ ಖರ್ಚು ಮಾಡಬೇಕಾದ ತುರ್ತು ಉಂಟಾಯಿತು. ಫ್ರಾನ್ಸ್ ನ ಮೂಲಭೂತ ಆಹಾರವಾದ ಬ್ರೆಡ್ ಅನ್ನು ಕೊಳ್ಳಲಾರದ ಸ್ಥಿತಿಗೆ ಅನೇಕ ಜನರು ತಲುಪಿದರು. ಇದರಿಂದ ಅಗತ್ಯವಸ್ತುಗಳ ಬೆಲೆಯೂ ಗಗನಕ್ಕೇರಿತು ಹಾಗು ಬ್ರೆಡ್ ಉತ್ಪಾದನೆಯೂ ಕುಂಠಿತವಾಗತೊಡಗಿತು. ಇದು ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಲು ನಾಂದಿ ಹಾಡಿತು.

ಆಹಾರವೇ ಸಿಗದೇ ದುಡಿಯುವ ವರ್ಗದ ಜನರು ರೋಸಿ ಹೋದರು ಹಾಗೂ ಅದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವ ಸಲುವಾಗಿ ಕ್ರಾಂತಿ ಮಾರ್ಗ ಹಿಡಿದರು.

ತತ್ವಜ್ಞಾನಿಗಳು(ಸಾಮಾಜಿಕ ದಾರ್ಶನಿಕರು) ಬದಲಾಯಿಸಿ

ಜಾನ್ ಲಾಕ್ಕೆ, ಜೀನ್ ಜಾಕ್ವೆಸ್ ರೋಶಿಯೋ, ಮಾಂಟೆಸ್ಕ್ಯೂರಂತಹ ಸಾಮಾಜಿಕ ದಾರ್ಶನಿಕರು ತಮ್ಮ ಪುಸ್ತಕಗಳಲ್ಲಿ ಹಾಗು ಪತ್ರಿಕೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಜನ ಸಾಮಾನ್ಯರೊಂದಿಗೆ ಹಂಚಿಕೊಂಡರು. ಇವರು ಜನರ ಕಣ್ಣುಗಳನ್ನು ತೆರೆಸಿ ಸಮಾನತೆಯ ಸಮಾಜವನ್ನು ತೋರಿಸಿದರು.ಇವರ ಈ ವಿಚಾರಗಳು, ಹಾಗು ಕಲ್ಪನೆಗಳು ಸಮಾಜವನ್ನು ಕ್ರಾಂತಿಗೆ ಮುನ್ನುಗ್ಗಿಸಿತು.

ಮಧ್ಯಮ ವರ್ಗ ಬದಲಾಯಿಸಿ

ಮಧ್ಯಮ ವರ್ಗದ ಜನತೆಗೆ ೧೮ನೇ ಶತಮಾನ ವರವಾಗಿ ಪರಿಣಮಿಸಿತೆಂದೇ ಹೇಳಬಹುದು. ಈ ಜನಾಂಗ ವಕೀಲಿ ವೃತ್ತಿ, ಕಾರ್ಯಕರ್ತರು ಹಾಗೂ ಶಿಕ್ಷಿತ ವ್ಯಕ್ತಿಗಳಾಗಿದ್ದು ಯಾವ ಜನಾಂಗಕ್ಕೂ ಹಕ್ಕುಗಳು ಸೀಮಿತವಾಗಿರಬಾರದು ಹಾಗೂ ಹಕ್ಕುಗಳು ಸರ್ವರಿಗೂ ಸಮಾನವಾಗಿ ದೊರೆಯಬೇಕು ಎಂಬ ನಿಲುವು ಹೊಂದಿದ್ದರು. ಶಿಕ್ಷಿತ ಜನಾಂಗದವರಾದ ಇವರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮುಂತಾದ ನಿಲುವುಗಳ ಪರ ಪ್ರಬಲ ಧೋರಣೆ ತಳೆದಿದ್ದರು. ಹಾಗೂ ಅವಿದ್ಯಾವಂತ, ಅಶಿಕ್ಷಿತ ವರ್ಗದವರಿಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಮಾನತೆ, ಸ್ವಾತಂತ್ರ್ಯ ಕುರಿತಾದ ಲೇಖನಗಳನ್ನು ಓದಿ ಹೇಳುತ್ತಿದ್ದರು. ಇದರಿಂದಾಗಿ ಪರೋಕ್ಷವಾಗಿ ಅವಿದ್ಯಾವಂತರನ್ನು ಕ್ರಾಂತಿಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದರು.

ತುರ್ತಾದ ಕಾರಣ ಬದಲಾಯಿಸಿ

೧೬ನೇ ಲೂಯಿಸನು ಎಸ್ಟೇಟ್ ಜೆನರಲ್ಸ್ ಸಮಿತಿಯನ್ನು ಸಭೆ ಕರೆದು ಅಲ್ಲಿ "ರಾಜನು ಏನೇ ನಿರ್ಧಾರ ತೆಗೆದುಕೊಂಡರೂ ೩ನೇ ಎಸ್ಟೇಟ್ ನವರು ಅದನ್ನು ಮರು ಪ್ರಶ್ನೆಯೇ ಇಲ್ಲದೆ ಒಪ್ಪಿಕೊಳ್ಳಬೇಕು, ಹಾಗೂ ಪ್ರತೀತಿಯಂತೆ 'ಒಂದು ಎಸ್ಟೇಟ್ ಒಂದು ವೋಟ್' ನಡೆಯಬೇಕು" ಎಂದು ತಿಳಿಯಪಡಿಸಿದನು. ಎಸ್ಟೇಟ್ ಜೆನೆರಲ್ಸ್ ಸಮಿತಿಯು ಇದನ್ನು ೩ನೇ ಎಸ್ಟೇಟ್ ನವರೊಂದಿಗೆ ಚರ್ಚಿಸಿದಾಗ ಅವರು ಆ ಹೇಳಿಕೆಗೆ ತಿದ್ದುಪಡಿಯಾಗುವಂತೆ ವಿನಂತಿಸಿಕೊಂಡರು ಅಂದರೆ 'ಒಬ್ಬ ಸದಸ್ಯ ಒಂದು ವೋಟ್' ನಂತಾಗಲಿ ಎಂಬುದಾಗಿ. ಆದರೆ ೩ನೇ ಎಸ್ಟೇಟ್ ದರ್ಜೆಯ ಜನರ ವಿರೋಧ ಅದಾಗಲೇ ರಾಜನಿಗೆ ತಿಳಿದಿದ್ದರಿಂದ ಆ ಕೋರಿಕೆಯನ್ನು ಒಪ್ಪದೇ ತಿರಸ್ಕರಿಸಿದನು. ಇದು ಮತ್ತೂ ಜನರನ್ನು ಕ್ರಾಂತಿಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು.

ಕ್ರಾಂತಿಯ ಸ್ವರೂಪ ಬದಲಾಯಿಸಿ

ರಾಷ್ಟ್ರೀಯ ಸಭೆ (೧೭೮೯-೧೭೯೨) ಬದಲಾಯಿಸಿ

 
ಟೆನ್ನಿಸ್ ಒಳಾಂಗಣ ಪ್ರಮಾಣ.

ಯಾವಾಗ ಅರಸನು ೩ನೇ ಎಸ್ಟೇಟ್ ನವರ ಬೇಡಿಕೆಗಳನ್ನು ಒಪ್ಪಲಿಲ್ಲವೋ ಆ ಕೂಡಲೇ ೩ನೇ ಎಸ್ಟೇಟ್ ದರ್ಜೆಯ ಎಲ್ಲರೂ ವರ್ಸೆಲ್ ನಗರದ ಟೆನಿಸ್ ಒಳಾಂಗಣ ಕ್ರೀಡಾಂಗಣದಲ್ಲಿ ಫ್ರಾನ್ಸ್ ದೇಶಕ್ಕೆ ಪ್ರಜಾಪ್ರಭುತ್ವ ಸರ್ಕಾರ ಕೊಡಲೇಬೇಕೆಂದು ಪಟ್ಟು ಹಿಡಿದು ಧರಣಿ ಕುಳಿತರು. ಇವರನ್ನು ಮಿರಬೋ ಹಾಗು ಅಬ್ಬೆ ಸಿಯೆಸ್ ನಾಯಕತ್ವದಲ್ಲಿ ಮುನ್ನಡೆಸಿದರು. ೧೪ ಜುಲೈ ೧೭೮೯ರಂದು ನೂರಕ್ಕೂ ಹೆಚ್ಚು ಜನರು ಪ್ಯಾರಿಸ್ ನಗರದ ಕಾರಾಗೃಹವಾದ ಬಾಸ್ಟಿಲ್ಗೆ ನುಗ್ಗಿ ಅಲ್ಲಿಯ ನಾಯಕನನ್ನು ಸೋಲಿಸಿ ಅಲ್ಲಿದ್ದ ೭ ಜನ ಬಂಧಿತರನ್ನು ಬಿಡುಗಡೆಗೊಳಿಸಿದರು.ಬಾಸ್ಟಿಲ್ ೧೬ನೇ ಲೂಯಿಸ್ ನ ಆಳ್ವಿಕೆಯ ಅತಿ ಘನತೆವೆತ್ತ ಸ್ಥಳಗಳಲ್ಲೊಂದಾಗಿತ್ತು[೨].

 
ಬಾಸ್ಟಿಲ್ ನೆಲಸಮ

ಕ್ರಾಂತಿಯ ಫಲ ಬದಲಾಯಿಸಿ

ಸಭೆಯ ಅಂಗೀಕರಣ ಬದಲಾಯಿಸಿ

೪ ಆಗಸ್ಟ್ ೧೭೮೯ರಂದು ಕ್ರಾಂತಿಯನ್ನು ತಾಳಲಾರದ ರಾಜನು ರಾಷ್ಟ್ರೀಯ ಸಭೆಯನ್ನು ಅಂಗೀಕರಿಸಿ ಸಂವಿಧಾನವನ್ನು ಸ್ವೀಕರಿಸಿದ.ಇದರಿಂದ ಫ್ರಾನ್ಸ್ ರಾಜಪ್ರಭುತ್ವದಿಂದ ಸಂವಿಧಾನ ಪ್ರಭುತ್ವಕ್ಕೆ ಬದಲಾಯಿತು.

ಜೀತ ಪದ್ಧತಿಯ ನಿರ್ಮೂಲನೆ ಬದಲಾಯಿಸಿ

೪ನೇ ಆಗಸ್ಟ್ ರಾತ್ರಿಯು ರಾಷ್ಟ್ರೀಯ ಸಭೆ ಜೀತ ಪದ್ಧತಿಯ ನಿರ್ಮೂಲನೆ ಎಂಬ ನ್ಯಾಯಾಜ್ಞೆಯನ್ನು ಅಂಗೀಕರಿಸಿತು. ಇದರ ಪ್ರಕಾರ ಯಾರೂ ಜೀತ ಮಾಡದೆ ಎಲ್ಲರು ತಮ್ಮ ತಮ್ಮ ಆದಾಯಕ್ಕೆ ತಕ್ಕ ಹಾಗೆ ಕಂದಾಯವನ್ನು ಕಟ್ಟಬೇಕಾಗಿತ್ತು.ಈ ಆಜ್ಞೆಯಿಂದ ದೇಶ ೨ ಬಿಲಿಯನ್ ಲಿವರ್ಸ್ ಪಡೆಯಿತು. ಇದಿಷ್ಟೇ ಅಲ್ಲದೆ ೨೬ ಆಗಸ್ಟರಂದು ಮಾನವ ಹಕ್ಕುಗಳ ಘೋಷಣೆಯನ್ನು ಮಾಡಿತು.ಇದು ಎಲ್ಲರಿಗು ಸಮಾನ ಹಕ್ಕುಗಳನ್ನು ನೀಡಿತು.ಈ ಸಮಯದಲ್ಲಿ ರಾಜೆಟ್ ದೆ ಲ್'ಇಸೆಲ್ ರಚಿಸಿದ ಮರ್ಸೈಲೆಸ್ ಹಾಡು ಫ್ರಾನ್ಸ್ ದೇಶದ ರಾಷ್ಟ್ರಗೀತೆಯಾಯಿತು.

ಸಂವಿಧಾನ ಬದಲಾಯಿಸಿ

೧೭೯೧ರ ಈ ಸಂವಿಧಾನದ ಪ್ರಕಾರ ನಾಗರೀಕರು ಸಕ್ರಿಯ ನಾಗರೀಕರು ಮತ್ತು 'ವಿಕ್ರಿಯ ನಾಗರೀಕರು ಎಂದು ಭಾಗ ಮಾಡಿದರು.ಸಕ್ರಿಯ ನಾಗರೀಕರು ೨೫ವರ್ಷ ಮೇಲ್ಪಟ್ಟ ಹಾಗು ಕೂಲಿಕಾರರ ೩ ದಿನದ ಸಂಬಳಕ್ಕೆ ಸಮಾನಾದ ಕಂದಾಯವನ್ನು ಕಟ್ಟುವ ಪುರುಷರು ಮಾತ್ರ.ಒಬ್ಬ ಸದಸ್ಯ ಒಂದು ವೋಟ್ ನಿಯಮ ಜಾರಿಯಾದ ಕಾರಣ ಸುಮಾರು ೪ ಮಿಲಿಯನ್ ಜನ ಮತ ಚಲಾಯಿಸಲು ಅರ್ಹತೆ ಪಡೆದುಕೊಂಡರು. ಪ್ರತೀ ಸದಸ್ಯನೂ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ೨೪೫ ಸಂಖ್ಯೆಯುಳ್ಳ ರಾಷ್ಟ್ರೀಯ ಸಭೆಗೆ ಕಳುಹಿಸಬಹುದಾಗಿತ್ತು.ಸಕ್ರಿಯ ನಾಗರೀಕರು ನ್ಯಾಯಧೀಶನನ್ನು ಮತಗಳ ಮೂಲಕ ಸೂಚಿಸುತ್ತಿದ್ದರು.ಆದರೆ ಮಿಕ್ಕ ೨೪ ಮಿಲಿಯನ್ ಜನಸಂಖ್ಯೆ ವಿಕ್ರಿಯ ನಾಗರೀಕರಾಗಿದ್ದು ಯಾವ ಮತದ ಹಕ್ಕು ಇರಲಿಲ್ಲ. ಸಂವಿಧಾನವು ಮಾನವ ಹಕ್ಕುಗಳ ಘೋಷಣೆಯಿಂದ ಪ್ರಾರಂಭವಾಯಿತು.ಅದು ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಹಕ್ಕುಗಳನ್ನು ನೀಡಿತು.ಇದು ಪರಾಮರ್ಶಕ-ರಹಿತ ಮಾಧ್ಯಮವನ್ನು ಜನರಿಗೆ ನೀಡಿತು.ಇದರಿಂದ ಪತ್ರಿಕೆಗಳು, ಚರ್ಚೆಗಳು ಇತ್ಯಾದಿಗಳು ಹೆಚ್ಚಾದವು.

ಜಾಕೊಬಿನ್ ಸರ್ಕಾರ(೧೭೯೨-೧೭೯೪) ಬದಲಾಯಿಸಿ

೧೭೯೧ ಬರೀ ಕೆಲವು ವರ್ಗದವರಿಗೆ ಮಾತ್ರ ಮತಹಕ್ಕು ಕೊಟ್ಟಿದ್ದರಿಂದ ಬೇರೆಯವರು ಪ್ರತ್ಯೇಕ ಕ್ಲಬ್ ಗಳನ್ನು ಸೃಷ್ಟಿಸಿಕೊಂಡು ಸೃಷ್ಟಿಸಿಕೊಂಡು ಅಲ್ಲಿ ಸಮಾಲೋಚನೆ ನಡೆಸಿದರು.ಇದರಲ್ಲಿ ಜಾಕೊಬಿನ್ ಕ್ಲಬ್ ಅತ್ಯಂತ ಮುಖ್ಯವಾದದ್ದು.ಜಾಕೊಬಿನ್ ಕ್ಲಬ್ ೩ನೇ ಎಸ್ಟೇಟ್ ಹಾಗು ವಿದ್ಯಾವಂತ ೧, ೨ನೇ ಎಸ್ಟೇಟ್ ನವರನ್ನು ಒಳಗೊಂಡಿದ್ದಿತು.ಇವರ ನಾಯಕ ಮ್ಯಾಕ್ಸಿಮಿಲ್ಲಿಯನ್ ರೋಬೆಸ್ಪಿಯರ್. ೧೦ ನೇ ಆಗಸ್ಟ್ ೧೭೯೨ರಂದು ಜಾಕೊಬಿನ್ ಕ್ಲಬ್ ಗೆ ಸೇರಿದವರೆಲ್ಲರೂ ಹೊಸ ನ್ಯಾಯಕ್ಕಾಗಿ ಆಗ್ರಹಿಸಿ ಟ್ಯುಲೇರಿಸ್ ಅರಮನೆಗೆ ನುಗ್ಗಿ ರಾಜನ ಕುಟುಂಬವನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡರು. ಪರಿಸ್ಥಿತಿ ಅರ್ಥ ಮಾಡಿಕೊಂಡ ರಾಜನು ನಿಯಮದಲ್ಲಿ ಸಡಿಲಿಕೆ ಮಾಡಿ ೨೧ ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವ ಹಕ್ಕು ಕೊಡಮಾಡಿದನು ಹಾಗೂ ಅಂತಹವರು ಸಕ್ರಿಯ ನಾಗರೀಕರೆಂದು ಘೋಷಣೆ ಮಾಡಿದನು. ಮುಂದೆ ೨೧ ಜನವರಿ ೧೭೯೩ರಂದು ೧೬ನೇ ಲೂಯಿಸ್ ನನ್ನು ಗಿಲಟೀನ್ನಲ್ಲಿ ಮರಣ ದಂಡಿಸಲಾಯಿತು.

 
ಲುಯಿಸ್ ೧೬ರ ಮರಣದಂಡನೆ

ರೀನ್ ಆಫ್ ಟೆರರ್ ಬದಲಾಯಿಸಿ

೧೭೯೩-೧೭೯೪ನ್ನು ರೀನ್ ಆಫ್ ಟೆರರ್(ಭಯೋತ್ಪಾದನೆಯ ಆಳ್ವಿಕೆ) ಎಂದೇ ಕರೆಯಲಾಗುತ್ತಿತ್ತು.೧೬ನೇ ಲೂಯಿಸ್ ನ ಮರಣಾನಂತರ ಅಧಿಕಾರ ಮದದಿಂದ ತುಂಬಿದ ಜಾಕೋಬಿಯನ್ ಮುಖಂಡ ರಾಬೆಸ್ಪಿಯರ್ ಪ್ರಜಾತಂತ್ರ ವಿರೋಧಿಗಳನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುತ್ತಿದ್ದನು ಹಾಗೂ ವಿರೋಧಿಗಳೆಲ್ಲರ ಸೊಲ್ಲಡಗಿಹೋಗುವಂತೆ ಅವರನ್ನು ಕೊಲ್ಲಿಸುತ್ತಿದ್ದ. ಇವನ ಆಡಳಿತ ಕಾಲದಲ್ಲಿ ಬ್ರೆಡ್ ನ ಬೆಲೆ ಕೆಳಗಿಳಿಯಿತಾದರೂ ಗೋಧಿ ಯಿಂದ ತಯಾರಾದ ಹಿಟ್ಟನ್ನು ಮಾತ್ರ ಉಪಯೋಗಿಸಬೇಕೆಂಬ ನಿಯಮ ಜಾರಿ ಮಾಡಿದನು. ಸರ್ವ ಜನರ ಆರಾಧನಾ ಕೇಂದ್ರಗಳಾಗಿದ್ದ ಚರ್ಚುಗಳನ್ನು ಮುಚ್ಚಿ ಕಾರ್ಯಾಲಯಗಳನ್ನಾಗಿ ಮಾಡಲಾಯಿತು. ರಾಬೆಸ್ಪಿಯರ್ ಕಾರ್ಯನೀತಿ ನಿರ್ಣಾಯಗಳು ಹಾಗೂ ಆತ ವಿಧಿಸುತ್ತಿದ್ದ ಅತಿ ಕಠೋರ ದಂಡನೆಗಳನ್ನು ಸಹಿಸದಾದ ಸಾಮಾನ್ಯರು ಗಿಲಟೀನ್ನಲ್ಲಿ ಆತನನ್ನು ಗಲ್ಲಿಗೇರಿಸಿದರು[೩].

ಡೈರೆಕ್ಟರಿ ಮತ್ತು ನೆಪೋಲಿಯನ್ ಬದಲಾಯಿಸಿ

ರಾಬೆಸ್ಪಿಯರ್ ಮರಣಾನಂತರ ೧೭೯೪ರಲ್ಲಿ ಜಾಕೊಬಿನ್ ಸರ್ಕಾರ ಕಳಚಿ ಬಿತ್ತು, ಆಗ ಸಮಾಜದ ಶ್ರೀಮಂತರು ಮತ್ತೆ ಸಮಾಜದ ಕೆಳಗಿನ ಜನಾಂಗದವರಿಂದ ಮತಹಕ್ಕನ್ನು ಹಿಂತೆಗೆದುಕೊಂಡು ಹಿಂದಿದ್ದ ಎಸ್ಟೇಟ್ ಮಾದರಿಯ ವಿಭಾಗೀಕರಣವನ್ನು ಪ್ರಯೋಗಿಸಲು ಪ್ರಯತ್ನ ಪಟ್ಟರು .ಆದರೆ ಅದೂ ಬಹಳ ಕಾಲ ನಡೆಯಲಿಲ್ಲ. ಮುಂದೆ ೧೮೦೪ರಲ್ಲಿ ನೆಪೋಲಿಯನ್ ಫ್ರಾನ್ಸ್ ನ ಆಡಳಿತ ಚುಕ್ಕಾಣಿಯನ್ನು ತನ್ನ ಕೈಗೆ ತೆಗೆದುಕೊಂಡನು .ಪ್ರಜಾತಂತ್ರದಿಂದ ಮತ್ತೆ ಫ್ರಾನ್ಸ್ ರಾಜ ಪ್ರಭುತ್ವದ ಕಡೆಗೆ ಹೊರಳಿತು.

ಫ್ರೆಂಚ್ ಕ್ರಾಂತಿಯ ಫಲಗಳು ವರ್ತಮಾನದಲ್ಲಿ ಬದಲಾಯಿಸಿ

ಫ್ರೆಂಚ್ ಕ್ರಾಂತಿಯ ಶಬ್ದಗಳಾಗಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ(liberty, equality and fraternity) ಹೊರಹೊಮ್ಮಿತು.ಇಂದೂ ಕೂಡ ಈ ಶಬ್ದಗಳು ಹಲವಾರು ದೇಶಗಳ ಸಂವಿಧಾನದ ಮೂಲಭೂತ ಅಂಶಗಳಾಗಿವೆ.ಫ್ರಾನ್ಸ್ ನಿಂದ ಬೇರೆ ದೇಶಗಳಿಗೂ ಹರಡಿದ ಈ ಸಾಮಾಜಿಕ ವಿಚಾರಗಳು ಜೀತಪದ್ಧತಿಯನ್ನು ತೆಗೆದು ಹಾಕಲು ಬಹು ಸಹಕಾರಿಯಾದವು. ಫ್ರಾನ್ಸ್ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸುಭದ್ರವಾಗಿ ತಳವೂರಲು ಸಾಧ್ಯವಾಗದಿದ್ದರೂ ಇತರೆ ಹಿಂದುಳಿದ ಹಾಗೂ ವಸಾಹತುಗಳಾಗಿದ್ದ ದೇಶಗಳಿಗೆ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ಹೊಸ ಆಯಾಮವೊಂದು ನಿರ್ಮಾಣವಾಯಿತು.

ಬಾಹ್ಯ ಸಂಪರ್ಕಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ಫ್ರೆಂಚ್ ಸಾಮ್ರಾಜ್ಯದ ಚಕ್ರಾಧಿಪತ್ಯ ಕೊನೆ ಎಂಬ ಆಂಗ್ಲ ಪುಸ್ತಕದ ಆರನೇ ಅಧ್ಯಾಯ".
  2. "ಸ್ಪಾರ್ಕ್ ನೋಟ್ಸ್ ಆಂಗ್ಲ ಮಾಹಿತಿ ತಾಣದ ಫ್ರೆಂಚ್ ಕ್ರಾಂತಿಯ ಕುರಿತಾದ ವಿಸ್ಮೃತ ಲೇಖನ".
  3. "ವೆ ಬ್ಯಾಕ್ ಮಷೀನ್ ಆಂಗ್ಲ ಮಾಹಿತಿ ತಾಣದ ಫ್ರೆಂಚ್ ಕ್ರಾಂತಿಯಲ್ಲಿ ಭಯೋತ್ಪಾದನೆ ಕುರಿತಾದ ಲೇಖನ" (PDF). Archived from the original on 2012-01-17. Retrieved 2019-01-06.{{cite web}}: CS1 maint: bot: original URL status unknown (link)