ಕರ್ನಾಟಕ ಅಂತರ್ಜಲ ಪ್ರಾಧಿಕಾರ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ನಗರಗಳಲ್ಲಿ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಹತ್ತು ಜಿಲ್ಲೆಗಳ 35 ತಾಲ್ಲೂಕುಗಳಲ್ಲಿ ಅಂತರ್ಜಲದ ಮೀರೆಳೆತದಿಂದಾಗಿ ಉದ್ಭವಿಸಿದ ಸಮಸ್ಯೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ 2011ರಲ್ಲೇ ಕರ್ನಾಟಕ ಅಂತರ್ಜಲ ಕಾಯ್ದೆ ( ನಿಯಂತ್ರಣ ಹಾಗೂ ನಿರ್ವಹಣೆ) ಕಾಯ್ದೆಗೆ ಒಪ್ಪಿಗೆ ನೀಡಿ, ಇದರ ಭಾಗವಾಗಿ 2012ರಲ್ಲಿ ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಚಿಸಿತು. ಈ ಕಾಯ್ದೆಯನ್ವಯ ಸದ್ಯ ಬೆಂಗಳೂರು ನಗರದ ಎಲ್ಲ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹಾಗೆಯೇ ಹೊಸತಾಗಿ ಕೊಳವೆ ಬಾವಿಗಳನ್ನು ತೆಗೆಯಲು ಸರ್ಕಾರದ ಅನುಮತಿ ಪಡೆಯಬೇಕು.

ಬೆಂಗಳೂರು ನಗರದ ವಾರ್ಷಿಕ ಮಳೆ ಪ್ರಮಾಣ ಸುಮಾರು 900 ಮಿ.ಮೀ.ಗಳಷ್ಟು. ಬಿದ್ದ ಮಳೆ ನೆಲದಾಳದಲ್ಲಿ ಜಿನುಗಲು ಟಾರ್ ರಸ್ತೆಗಳು ತಡೆಯೊಡ್ಡುತ್ತವೆ. ಅಲ್ಲದೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಗೆ ಸೇರಿದ ಸುಮಾರು ಮೂರು ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳು ಬೆಂಗಳೂರು ನಗರದಲ್ಲಿವೆ. ಸರ್ಕಾರದ ನಿಯಮವನ್ನು ಮೀರಿ ನೋಂದಣಿ ಮಾಡಿಕೊಳ್ಳದೆ ಕೊಳವೆ ಬಾವಿಗಳನ್ನು ತೋಡಿದರೆ ಗರಿಷ್ಠ ರೂ. 10,000 ದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.


ನಗರದಲ್ಲಿ ನೀರಿನ ಲಭ್ಯತೆ ಬದಲಾಯಿಸಿ

ಜಲಭೂವಿಜ್ಞಾನಿಗಳ ಅಧ್ಯಯನದ ಪ್ರಕಾರ ಬೆಂಗಳೂರಿನಲ್ಲಿ ವಾರ್ಷಿಕ 66,400 ಹೆಕ್ಟೇರು ಮೀಟರು ಮಳೆ ಬೀಳುತ್ತದೆ. ಈ ಪೈಕಿ 17,040 ಹೆಕ್ಟೇರು ಮೀಟರು ಓಡು ನೀರಾಗಿ ಹರಿದುಹೋಗುತ್ತದೆ. ಭೂಮಿಯೊಳಗೆ ಜಿನುಗಿ ಅಂತರ್ಜಲ ಮರುಪೂರಣೆಯಾಗುವ ನೀರಿನ ಪ್ರಮಾಣ 3,290 ಹೆಕ್ಟೇರು ಮೀಟರ್. ಸುಮಾರು ಶೇ. 71.14 ಭಾಗದ ಮಳೆ ನೀರು ಬಾಷ್ಪವಾಗಿ ಹೋಗುತ್ತದೆ. ಇನ್ನು ಕಾವೇರಿ ನದಿಯ ನೀರನ್ನೇ ಪ್ರಮುಖವಾಗಿ ಬಳಸುತ್ತಿರುವ ಬೆಂಗಳೂರಿಗೆ ಲಭ್ಯವಾಗುತ್ತಿರುವ ನೀರಿನ ಪ್ರಮಾಣ 24,923 ಹೆಕ್ಟೇರು ಮೀಟರ್. ಆದರೆ ವಾರ್ಷಿಕ ಬೇಡಿಕೆ ಇರುವುದು 48,600 ಹೆಕ್ಟೇರ್ ಮೀಟರ್. ಸದ್ಯದಲ್ಲಿ 3.12 ಲಕ್ಷ ಕೊಳವೆ ಬಾವಿಗಳು ಬೆಂಗಳೂರಿನಲ್ಲಿ ಕಾರ್ಯನಿರತವಾಗಿವೆ. ಇವುಗಳಿಂದ ಎತ್ತುತ್ತಿರುವ ನೀರಿನ ಪ್ರಮಾಣ ವಾರ್ಷಿಕ 12,451 ಹೆಕ್ಟೇರು ಮೀಟರ್ ಅಂದರೆ ಮರುಪೂರಣೆಗಿಂತ ನೀರಿನ ಎಳೆತವೇ ಶೇ. 378 ಭಾಗ. ಬೆಂಗಳೂರಿಗೆ ಕೊರತೆ ಇರುವ ನೀರಿನ ಪ್ರಮಾಣ 11,226 ಹೆಕ್ಟೇರು ಮೀಟರು. ಚರಂಡಿಯಲ್ಲಿ ಹರಿದುಹೋಗುವ ನೀರಿನ ಪ್ರಮಾಣ 17,040 ಹೆಕ್ಟೇರು ಮೀಟರು. ಈ ಬಾಬತ್ತಿನ ನೀರನ್ನು ಸಂರಕ್ಷಿಸಲು ಅವಕಾಶವಿದೆ. ಅಲ್ಲದೆ ಕೊಳಚೆ ನೀರಾಗಿ ಹರಿದುಹೋಗುತ್ತಿರುವ 26,300 ಹೆಕ್ಟೇರು ಮೀಟರು (ವಾರ್ಷಿಕ_ ನೀರನ್ನು ಮೂರನೇ ಹಂತದಲ್ಲಿ ಶೇ. 70 ಭಾಗವನ್ನು ಸಂಸ್ಕರಿಸಿದರೂ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಉಲ್ಲೇಖ ಬದಲಾಯಿಸಿ

  • Journal of The Geological Society of India, Vol. 81, No.5, May, 2013